ADVERTISEMENT

‘ಸಾಮಾಜಿಕ ಸಮಾನತೆ ಸಾರಿದ ಅಲ್ಲಮಪ್ರಭು’

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 6:42 IST
Last Updated 17 ಅಕ್ಟೋಬರ್ 2017, 6:42 IST

ಗದಗ: ‘ಮೂಢನಂಬಿಕೆ, ಕಂದಾಚಾರಗಳನ್ನು ವಿರೋಧಿಸಿ, ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಶ್ರೇಯಸ್ಸು ಅಲ್ಲಮಪ್ರಭುಗಳಿಗೆ ಸಲ್ಲುತ್ತದೆ’ ಎಂದು ಶಿರಹಟ್ಟಿಯ ಎಫ್.ಎಂ.ಡಬಾಲಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಹನಮರಡ್ಡಿ ಎನ್. ಅಭಿಪ್ರಾಯಪಟ್ಟರು.ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕವು ಆಯೋಜಿಸಿದ್ದ ವಾರದ ಸಾಹಿತ್ಯ ಚಿಂತನ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಲ್ಲಮಪ್ರಭು 12ನೇ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಒಬ್ಬರು. ವಚನ ಕ್ರಾಂತಿಯ ಮೂಲಕ ಸಮಾನತೆ, ಸಾಮಾಜಿಕ ನ್ಯಾಯ, ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರು’ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಗೇರಿ, ‘ಅಲ್ಲಮಪ್ರಭು ಶೂನ್ಯ ಪೀಠಾಧ್ಯಕ್ಷರಾಗಿ ಈಗಿನ ಸಂಸತ್ತಿನ ಪರಿಕಲ್ಪನೆಯನ್ನು 12ನೇ ಶತಮಾನದಲ್ಲಿಯೇ ಜಾರಿಗೆ ತಂದಿದ್ದರು. ವೈಜ್ಞಾನಿಕ ಪರಿಕಲ್ಪನೆ, ಸಾಮಾಜಿಕ ಕಳಕಳಿಯೊಂದಿಗೆ ಸಮಾನತೆಯ ಪಾಠವನ್ನು ಬೋಧಿಸಿದರು. ಅವರ ವಚನಗಳ ಆಶಯದಂತೆ ನಾವೆಲ್ಲರೂ ನಡೆಯಬೇಕಾಗಿದೆ’ ಎಂದರು.

ADVERTISEMENT

ಹಾತಲಗೇರಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಲಿಂಗನಗೌಡ ಎನ್.ಪಾಟೀಲ ಕವನ ವಾಚಿಸಿದರು. ಕೆ.ವಿ. ಕುಂದಗೋಳ, ರತ್ನಕ್ಕ ಪಾಟೀಲ, ಎಸ್.ಆರ್.ಹೂಗಾರ, ಸಿ.ಕೆ.ಕೇಸರಿ, ಎಚ್.ಎಸ್.ಜಂಗಣ್ಣವರ, ಅ.ದ.ಕಟ್ಟಿಮನಿ, ಶಂಕ್ರಣ್ಣ ಅಂಗಡಿ, ಪ್ರೋ.ಜಯಶ್ರೀ ಅಂಗಡಿ, ಸುರೇಶ ಅಂಗಡಿ, ಬಸವರಾಜ ಗಣಪ್ಪನವರ, ಜೆ.ಎ.ಪಾಟೀಲ, ಎಸ್.ಆರ್.ನದಾಫ, ಎ.ಆರ್.ನದಾಫ, ವಾಯ್.ಕೆ.ನದಾಫ, ಎನ್.ಹೆಚ್.ಶರಸೂರಿ ಇದ್ದರು. ಮಂಜುಳಾ ಅಕ್ಕಿ ಪ್ರಾರ್ಥಿಸಿದರು. ಪ್ರಕಾಶ.ಮಂಗಳೂರು ನಿರೂಪಿಸಿದರು. ಜೆ.ಬಿ.ಶ್ರೀಗಿರಿ ಸ್ವಾಗತಿಸಿದರು. ಅಶೋಕ ಹಾದಿ ವಂದಿಸಿದರು. ಲಕ್ಷ್ಮೇಶ್ವರದ ಎನ್.ಹೆಚ್.ಶರಸೂರಿ ಅವರ ಹಾಲುಮತದ ನಕ್ಷತ್ರಗಳು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.