ADVERTISEMENT

ಸ್ಥಳಾಂತರಿಸಿದ ಮರಗಳಲ್ಲಿ ಹೊಸ ಚಿಗುರು

ಯಶಸ್ವಿಯಾದ ಪ್ರಾಯೋಗಿಕ ಯೋಜನೆ; ಎರಡನೆಯ ಹಂತದಲ್ಲಿ ವೆಚ್ಚ ತಗ್ಗಿಸಲು ಕ್ರಮ

ಜೋಮನ್ ವರ್ಗಿಸ್
Published 10 ಜುಲೈ 2017, 11:01 IST
Last Updated 10 ಜುಲೈ 2017, 11:01 IST
ಸ್ಥಳಾಂತರಿಸಿದ ಮರಗಳಲ್ಲಿ ಹೊಸ ಚಿಗುರು
ಸ್ಥಳಾಂತರಿಸಿದ ಮರಗಳಲ್ಲಿ ಹೊಸ ಚಿಗುರು   

ಗದಗ: ಎರಡು ವರ್ಷಗಳ ಹಿಂದೆ ಕಾರವಾರ–ಇಳಕಲ್‌ ರಸ್ತೆ ವಿಸ್ತರಣೆಗಾಗಿ ನಗರದ ಭೀಷ್ಮ ಕೆರೆ ಆವರಣದಲ್ಲಿ ಬೆಳೆದು ನಿಂತಿದ್ದ ಬೇವು, ಆಲ, ಹುಣಸೆ, ಅರಳಿ, ಆಕಾಶ ಮಲ್ಲಿಗೆ ಸೇರಿದಂತೆ ವಿವಿಧ ಜಾತಿಯ 100ಕ್ಕೂ ಹೆಚ್ಚು ಮರ ಗಳನ್ನು ಕಡಿಯಲಾಗಿತ್ತು.

ಗದಗ–ಮುಂಡರಗಿ ರಸ್ತೆ ವಿಸ್ತರಣೆ ಸಂದರ್ಭ ದಲ್ಲಿ 800ಕ್ಕೂ ಹೆಚ್ಚು ಮರಗಳು ಪ್ರಗತಿಯ ಕೊಡಲಿಗೆ ಬಲಿಯಾಗಿದ್ದವು. ಈ ವರ್ಷ ಕೂಡ ಹುಬ್ಬಳ್ಳಿ–ಗದಗ– ಕೊಪ್ಪಳ  ರಸ್ತೆ ವಿಸ್ತರಣೆಗಾಗಿ ಸಾವಿರಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಲು ಗುರುತಿಸಲಾಗಿತ್ತು.

ಆದರೆ, ಈ ಬಾರಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ  ಎಚ್ಚೆತ್ತು ಇದರಲ್ಲಿ ಗರಿಷ್ಠ ಸಂಖ್ಯೆಯ ಮರಗಳನ್ನು ಉಳಿಸಲು ಯೋಜನೆ ರೂಪಿಸಿದೆ. ಈಗಾಗಲೇ ಪ್ರಾಯೋಗಿಕವಾಗಿ ಸ್ಥಳಾಂತರಿಸಿದ್ದ 5 ಆಲದ ಮರಗಳಲ್ಲಿ ಹೊಸ ಚಿಗುರು ಮೂಡಿದೆ. ರಾಷ್ಟ್ರೀಯ ಹೆದ್ದಾರಿ 63ರಿಂದ 12 ಕಿ.ಮೀ. ದೂರ ದಲ್ಲಿರುವ ಭೀಷ್ಮಕೆರೆ ಆವರಣದಲ್ಲಿ ಈ ಮರಗಳನ್ನು ನೆಡಲಾಗಿತ್ತು.

ADVERTISEMENT

‘ಈ ಮರಗಳನ್ನು ಸ್ಥಳಾಂತರಿಸಿ ಇದೀಗ ಒಂದು ತಿಂಗಳು ಕಳೆದಿದ್ದು, ಹೊಸ ಚಿಗುರು ಮೂಡಲು ಆರಂಭಿಸಿವೆ ‘ಪ್ರಾಯೋಗಿಕವಾಗಿ ನಡೆಸಿದ ಯೋಜನೆ ಯಶಸ್ವಿಯಾಗಿದೆ. ಹಂತ ಹಂತವಾಗಿ 400ರಿಂದ 500 ಮರಗಳನ್ನು  ಸ್ಥಳಾಂ ತರ ಮಾಡುತ್ತೇವೆ. ಗರಿಷ್ಠ ಸಂಖ್ಯೆಯಲ್ಲಿ ಮರಗಳನ್ನು ಸ್ಥಳಾಂತರ ಮಾಡಬೇಕು ಎಂಬುದು ನಮ್ಮ ಆಶಯ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ಹೇಳಿದರು.

ದತ್ತು ಯೋಜನೆ: ರಸ್ತೆ ವಿಸ್ತರಣೆ ವೇಳೆ ಬಲಿಯಾಗುವ ಮರಗಳನ್ನು ಸಂರಕ್ಷಿ ಸಲು ಸಂಘ ಸಂಸ್ಥೆಗಳು, ಸಾರ್ವಜನಿಕರು ಮುಂದೆ ಬಂದರೆ, ಅವರಿಗೂ ಮರ ಗಳನ್ನು ದತ್ತು ನೀಡುವ ಯೋಜನೆ ಯನ್ನು ಜಿಲ್ಲಾಡಳಿತ ಪ್ರಕಟಿಸಿದೆ. ತಮ್ಮ ಮನೆ ಮುಂದೆ, ಕಚೇರಿ ಮುಂದೆ, ಖಾಲಿ ಸ್ಥಳಗಳಲ್ಲಿ ಈ ಮರಗಳನ್ನು ನೆಡಲು ಜನ ಮನವಿ ಸಲ್ಲಿಸಬಹುದು.

‘ಸ್ಥಳಾಂತರಿಸಿದರೂ ದೊಡ್ಡ ಮರ ಗಳು ಬದುಕಿ ಉಳಿಯುವ ಸಾಧ್ಯತೆ ಹೆಚ್ಚಿ ರುತ್ತದೆ. ವಿಶೇಷವಾಗಿ ನಾರು ನಾರಾದ ಬೇರಿನ ವ್ಯವಸ್ಥೆ ಹೊಂದಿರುವ ಆಲ, ಅರಳಿ, ಬಸರಿ ಜಾತಿಯ ಮರಗಳನ್ನು ಸುಲಭವಾಗಿ ಸ್ಥಳಾಂತರಿಸಿ ನೆಡಬಹುದು. ಇವು ಎಂತಹ ಪರಿಸ್ಥಿತಿಯಲ್ಲೂ ಬಾಳಿ ಬದುಕುತ್ತವೆ. ತಾಯಿ ಬೇರುವ್ಯವಸ್ಥೆ ಹೊಂದಿರುವ ಮರಗಳ ಬೇರುಗಳು ನೆಲದಾಳಕ್ಕೆ ಇಳಿದಿರುತ್ತವೆ. ಇವುಗಳನ್ನು ಕೀಳುವಾ ಎಚ್ಚರ ವಹಿಸಬೇಕು’ ಎನ್ನು ತ್ತಾರೆ ಆರ್‌ಎಫ್‌ಒ ಕೆ.ಪಿ.ಅಂಗಡಿ.

***

ಸ್ಥಳಾಂತರ ವೆಚ್ಚ ತಗ್ಗಿಸಲು ಯೋಜನೆ

ತಾಲ್ಲೂಕಿನ ಹೊಸಹಳ್ಳಿ ಕ್ರಾಸ್‌ನಿಂದ ಕೀಳಲಾದ 15 ವರ್ಷದ ಆಲದ ಮರವನ್ನು 12 ಕಿಮೀ ದೂರದಲ್ಲಿರುವ ಗದುಗಿನ ಭೀಷ್ಮ ಕೆರೆ ಆವರಣಕ್ಕೆ ಸ್ಥಳಾಂತರಿಸಿ ಸ್ಥಳಾಂತರಿಸಿ ನೆಡಲಾಗಿತ್ತು. ಹೀಗೆ ಒಂದು ಮರದ ಸ್ಥಳಾಂತರಕ್ಕೆ  ಕನಿಷ್ಠ ₹ 6ರಿಂದ ₹ 15 ಸಾವಿರದವರೆಗೆ ವೆಚ್ಚವಾಗಲಿದೆ.

ಸ್ಥಳಾಂತರದ ಅಂತರ ಹೆಚ್ಚಿದಷ್ಟು ಸಾಗಣೆ ವೆಚ್ಚವೂ ಹೆಚ್ಚುತ್ತದೆ. ಬೇರುಗಳು ಒಣಗುವುದರಿಂದ ಮರದ ಆಯುಷ್ಯ ಕೂಡ ಕ್ಷೀಣಿಸುತ್ತದೆ. ಇದನ್ನು ತಪ್ಪಿಸಲು, ಸಾಧ್ಯವಾದಷ್ಟು ದೊಡ್ಡ ಮರಗಳನ್ನು ಮೂಲ ಸ್ಥಾನದಿಂದ ಕನಿಷ್ಠ ಅಂತರದಲ್ಲಿ, ಅಂದರೆ ರಸ್ತೆ ವಿಸ್ತರಣೆ ಬಳಿಕ ಅದರ ಪಕ್ಕದಲ್ಲೇ ಸ್ಥಳಾಂತರಿಸಿ ನೆಡುವ ಕುರಿತು ಚಿಂತಿಸಲಾಗುತ್ತಿದೆ. ಇದರಿಂದ ವೆಚ್ಚವನ್ನೂ ಗಣನೀಯವಾಗಿ ತಗ್ಗಿಸಬಹುದು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅಧ್ಯಕ್ಷತೆಯ ಮರ ಸ್ಥಳಾಂತರ ಸಮಿತಿಯು ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಯಶಪಾಲ್‌ ಹೇಳಿದರು. ಚಿಕ್ಕ ಸಸಿಗಳ ಬದಲು ದೊಡ್ಡ ಮರ ನೆಡುವುದರಿಂದ ವಿವಿಧ ರೀತಿಯಲ್ಲಿ ಖರ್ಚು ತಗ್ಗಿಸಬಹುದು ಎನ್ನುವುದು ತಜ್ಞರ ಅಭಿಮತ.
***

ಸ್ಥಳಾಂತರಿಸಿದ ಮರಗಳನ್ನು ಭೀಷ್ಮಕೆರೆ, ಗ್ರಾಮೀಣಾಭಿವೃದ್ಧಿ ವಿ.ವಿ. ಆವರಣದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ನೆಡಲಾಗುವುದು. ಬೇಡಿಕೆ ಸಲ್ಲಿಸಿದರೆ ಸಾರ್ವಜನಿಕರಿಗೂ  ನೀಡಲಾಗುವುದು
ಯಶಪಾಲ ಕ್ಷೀರಸಾಗರ, ಉಪ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.