ADVERTISEMENT

‘ಸ್ವಾರ್ಥ ರಾಜಕಾರಣಿಗಳಿಂದ ವೀರಶೈವ–ಲಿಂಗಾಯತ ನಡುವೆ ಕಂದಕ’

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 8:45 IST
Last Updated 21 ನವೆಂಬರ್ 2017, 8:45 IST

ಮುಂಡರಗಿ: ‘ವೀರಶೈವ–ಲಿಂಗಾಯತ ಒಂದೇ ಆಗಿದ್ದು, ಕೆಲವು ಸ್ವಾರ್ಥ ರಾಜಕಾರಣಿಗಳು ಹಾಗೂ ಮಠಾಧೀಶರು ಇವೆರಡರ ಮಧ್ಯೆ ಕಂದಕ ಸೃಷ್ಟಿಸಿ, ಜನಸಾಮಾನ್ಯರಲ್ಲಿ ಅನವಶ್ಯಕವಾಗಿ ಗೊಂದಲ ಮೂಡಿಸುತ್ತಿದ್ದಾರೆ’ ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ಆರೋಪಿಸಿದರು.

ಇಲ್ಲಿನ ವೀರಭದ್ರೇಶ್ವರ ದೇವಸ್ಥಾನದ ದಶಮಾನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಾಮೂಹಿಕ ವಿವಾಹಗಳು ಬಡ ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಸಮಸ್ಯೆ ನಿವಾರಿಸುತ್ತವೆ. ಎಲ್ಲ ವರ್ಗದ ಜನರು ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆ ಮಾಡಿಕೊಳ್ಳುವುದರಿಂದ ಸಾಮರಸ್ಯ ಮೂಡುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಇಂದು ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಕಡಿಮೆಯಾಗುತ್ತಿದೆ. ನೂತನ ವಧು– ವರರು ತಮ್ಮ ತಂದೆ, ತಾಯಿ, ಅತ್ತೆ, ಮಾವ ಎಲ್ಲರನ್ನೂ ಗೌರವದಿಂದ ಕಾಣಬೇಕು’ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ನಿವೃತ್ತ ಉಪನ್ಯಾಸಕ ಡಾ.ಎಸ್‌.ಶಿವಾನಂದ ಮಾತನಾಡಿ, ‘ಗಂಡ–ಹೆಂಡತಿ ನಡುವಿನ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ತಾವೆ ನಿವಾರಿಸಿಕೊಳ್ಳಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಮೇಟಿ ಮಾತನಾಡಿದರು. ವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿ.ಆರ್‌.ಹಿರೇಮಠ ಹಾಗೂ ಷಡಕ್ಷರಯ್ಯ ಅಳವಂಡಿಮಠ ವಿವಾಹದ ಧಾರ್ಮಿಕ ವಿಧಿಗಳನ್ನು ನಡೆಸಿಕೊಟ್ಟರು.

ಎ.ಕೆ.ಬೆಲ್ಲದ, ಧ್ರುವಕುಮಾರ ಹೊಸಮನಿ, ದೊಡ್ಡಪ್ಪ ಅಂಗಡಿ, ಅಂದಪ್ಪ ಗೋಡಿ, ಅಜ್ಜಪ್ಪ ಲಿಂಬಿಕಾಯಿ, ಶಿವಯೋಗಿ ಕೊಪ್ಪಳ, ಶರಣಪ್ಪ ಅಂಗಡಿ, ಸುರೇಶ ಮಾಳೆಕೊಪ್ಪ, ಸಂತೋಷ ಹಿರೇಮನಿ, ರವಿ ಕಾಶಿಗವಿ, ಶರಣಪ್ಪ ಹುಲ್ಲೂರ, ಮುತ್ತಣ್ಣ ಶೀರಿ, ವಿ.ಜೆ.ಹಿರೇಮಠ, ಅಂದಾನಪ್ಪ ಕುರಡಗಿ, ಎ.ಪಿ.ದಂಡಿನ, ವೀರೇಶ ಸಜ್ಜನರ, ಕೊಟ್ರೇಶ ಅಂಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.