ADVERTISEMENT

ಹೋರಾಟದಿಂದ ಹಕ್ಕು ಪಡೆಯಿರಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 7:00 IST
Last Updated 19 ಫೆಬ್ರುವರಿ 2011, 7:00 IST

ಮುಂಡರಗಿ: ‘ಅರವತ್ತೇಳು ವಿವಿಧ ಉಪ ಕಸುಬುಗಳಲ್ಲಿ ಹಂಚಿ ಹೋಗಿರುವ ರಾಜ್ಯದ ಸುಮಾರು 35 ಲಕ್ಷ ವಿಶ್ವಕರ್ಮ ಸಮುದಾಯದ ಜನರು, ಸಂಘಟಿತರಾಗದೇ ಇರುವುದು ಹಾಗೂ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳದಿರುವುದು ದುರ್ದೈವದ ಸಂಗತಿ’ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಂಡಿ ವಿಷಾದ ವ್ಯಕ್ತಪಡಿಸಿದರು.  ತಾಲ್ಲೂಕು ವಿಶ್ವಕರ್ಮ ಸಮಾಜದ ಕಾರ್ಯಕರ್ತರು ಸ್ಥಳೀಯ ಕಾಳಿಕಾದೇವಿ ದೇವಸ್ಥಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ  ಅವರು ಮಾತನಾಡಿದರು.

‘ಕಮ್ಮಾರಿಕೆ, ಬಡಿಗತನ, ಶಿಲ್ಪಕಲೆ, ಕಂಚು ಹಾಗೂ ಚಿನ್ನಾಭರಣ ತಯಾರಿಕೆಯಂತಹ ಮಹತ್ವದ ಕಾರ್ಯಗಳಲ್ಲಿ ತೊಡಗಿಕೊಂಡಿರುವ ವಿಶ್ವಕರ್ಮ ಜನಾಂಗವು ಸರಕಾರವು ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ತೀರಾ ಕೊನೆಯ ಸ್ಥಾನದಲ್ಲಿದೆ. ಆದ್ದರಿಂದ ವಿಶ್ವಕರ್ಮ ಜನಾಂಗದವರೆಲ್ಲ ಒಂದಾಗಿ ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕಿದೆ’ ಎಂದರು.

 ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ನಂಜುಂಡಿಯವರ ಸಾಧನೆಯನ್ನು ಶ್ಲಾಘಿಸಿದರು.  ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ನೀಲಕಂಠಪ್ಪ ಪತ್ತಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿದರು. ಈಶ್ವರಪ್ಪ ಉಪ್ಪಿನಬೆಟಗೇರಿ, ಶಿರಹಟ್ಟಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕೆ.ವಿ. ಹಂಚಿನಾಳ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ರಿಹಾನಾಬೇಗಂ ಕೆಲೂರ, ಸದಸ್ಯ ಈರಣ್ಣ ಗಡಾದ, ಕೊಟ್ರೇಶ ಅಂಗಡಿ ಮೊದಲಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಎಸ್.ಎಂ. ಕಮ್ಮಾರ  ಸ್ವಾಗತಿಸಿದರು. ಶಿವಾನಂದ ಪತ್ತಾರ ಕಾರ್ಯಕ್ರಮ ನಿರೂಪಿಸಿದರು. ಮೋಹನ ಹಂಪಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.