ಮುಂಡರಗಿ: ‘ನೃತ್ಯ, ದೊಡ್ಡಾಟ, ಡೊಳ್ಳುಕುಣಿತ, ಹಾಡುಗಾರಿಕೆ ಮೊದಲಾದ ಜನಪದ ಕಲೆಗಳು ಮನರಂಜನೆ ನೀಡುವ ಜತೆ ಕಲಾವಿದರ ದೇಹಾರೋಗ್ಯವನ್ನು ಕಾಪಾಡುತ್ತವೆ. ಆದ್ದರಿಂದ ಅಂತಹ ಕಲಾ ಪ್ರಕಾರಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು’ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ಪಟ್ಟಣದ ಕೋಟೆ ಆಂಜನೇಯನ ದೇವಸ್ಥಾನದ ಬಳಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಸುಗ್ಗಿ–ಹುಗ್ಗಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಜಿಲ್ಲಾಮಟ್ಟದಲ್ಲಿ ಆಯ್ದ ಕಲಾವಿದರಿಗೆ ಮಾತ್ರ ಮಾಸಾಶನ ನೀಡಲಾಗುತ್ತಿತ್ತು. ಈಗ ಎಲ್ಲ ಕಲಾವಿದರೂ ಮಾಸಾಶನ ಪಡೆದುಕೊಳ್ಳಬಹುದಾಗಿದೆ. ಕಲಾವಿದರಿಗೆ ನೀಡುತ್ತಿದ್ದ ಮಾಸಾಶನದ ಮೊತ್ತವನ್ನು ₹ 500ರಿಂದ ₹ 1500ಕ್ಕೆ ಹೆಚ್ಚಿಸಲಾಗಿದ್ದು, ಅರ್ಹ ಕಲಾವಿದರು ಸೂಕ್ತ ದಾಖಲೆಗಳೊಂದಿಗೆ ಕನ್ನಡ ಮತ್ತು ಸಂಸೃತಿ ಇಲಾಖೆಗೆ ಅರ್ಜಿ ಸಲ್ಲಿಸಬಹುದು’ ಎಂದು ತಿಳಿಸಿದರು.
ಕೃಷಿ ಇಲಾಖೆಯ ಉಪ ನಿರ್ದೇಶಕ ಸಹದೇವ ಎರಗೊಪ್ಪ ಮಾತನಾಡಿ, ‘ಸಿರಿರಧಾನ್ಯಗಳಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಶಾಲಾ ಮಕ್ಕಳ ಬಿಸಿಯೂಟದಲ್ಲಿ ಸಿರಿಧಾನ್ಯ ಬಳಸುವ ಕುರಿತು ಸರ್ಕಾರದ ಉನ್ನತ ಮಟ್ಟದಲ್ಲಿ ಚಿಂತನೆ ನಡೆದಿದೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಮೇಟಿ, ವೀಣಾ ಪಾಟೀಲ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದ್ಯಾಮ್ಲಪ್ಪ ಲಮಾಣಿ, ಕಲಾವಿದರಾದ ಗವಿಸಿದ್ದಪ್ಪ ಬಳ್ಳಾರಿ, ಹನುಮಪ್ಪ ಕ್ಯಾಸಕ್ಕಿ, ಅಂದಪ್ಪ ಹಂದ್ರಾಳ ಹಾಗೂ ಕುಮಾರ ಹಡಗಲಿ ಅವರನ್ನು ಸನ್ಮಾನಿಸಲಾಯಿತು. ನಂತರ ವಿವಿದ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೊಗೇರಿ, ಮುಖಂಡರಾದ ಬಸವಂತಪ್ಪ ಮುದ್ದಿ, ಎ.ವೈ.ನವಲಗುಂದ, ದೇವಪ್ಪ ರಾಮೇನಹಳ್ಳಿ, ಸೋಮನಗೌಡ ಗೌಡ್ರ, ಕೋಟ್ರೇಶ ಅಂಗಡಿ, ಡಿ.ಡಿ.ಮೋರನಾಳ, ರಾಘವೇಂದ್ರ ಕುರಿಯವರ, ಡಿ.ಕೆ.ಹೊನ್ನಪ್ಪನವರ, ಅಜ್ಜಪ್ಪ ಲಿಂಬಿಕಾಯಿ, ಶಿವಪ್ಪ ಚಿಕ್ಕಣ್ಣವರ, ವೆಂಕಟೇಶ ಹೆಗಡಾಳ, ರುದ್ರಪ್ಪ ಲದ್ದಿ, ಅಂದಪ್ಪ ಉಳ್ಳಾಗಡ್ಡಿ, ಎಂ.ಜಿ.ವಡ್ಡಟ್ಟಿ, ಸಂತೋಷ ಹಿರೇಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.