ಗದಗ: ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಸದಸ್ಯರು ಶುಕ್ರವಾರ ನಗರದಲ್ಲಿ ವಿಜಯೋತ್ಸವ ಆಚರಿಸಿದರು. ಇಲ್ಲಿನ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
ಬಿಜೆಪಿ ಮಹಿಳಾ ಮೋರ್ಚಾ, ಯುವ ಮೋರ್ಚಾ, ಅಲ್ಪಸಂಖ್ಯಾತರ ಘಟಕ, ಗದಗ ಶಹರ, ಗ್ರಾಮೀಣ ಘಟಕದ ಸದಸ್ಯರು ಪಕ್ಷದ ಬಾವುಟ, ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಿಡಿದು, ಮೋದಿ ಮತ್ತು ಬಿಜೆಪಿ ಪರ ಘೋಷಣೆ ಮೊಳಗಿಸಿದರು.
‘ಮೋದಿ ಅವರು ಕಳೆದ 5 ವರ್ಷ ನೀಡಿದ ಭ್ರಷ್ಟಾಚಾರ ಮುಕ್ತ ಆಡಳಿತ, ಜನಪರ ಯೋಜನೆಗಳು, ದೇಶದ ಆರ್ಥಿಕ ವ್ಯವಸ್ಥೆ ಸುಧಾರಣೆ ಹಾಗೂ ದೇಶದ ರಕ್ಷಣೆಗೆ ತೆಗೆದುಕೊಂಡ ದಿಟ್ಟ ನಿರ್ಧಾರಗಳಿಗೆ ಅಪಾರ ಜನಬೆಂಬಲ ವ್ಯಕ್ತವಾಗಿದೆ. ಕೇಂದ್ರದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ನಡೆಸಲು ಜನಾದೇಶವಾಗಿದೆ’ ಎಂದು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು. ನಂತರ ಮೆರವಣಿಗೆ ಮೂಲಕ ಪಿ.ಬಿ ರಸ್ತೆಯಲ್ಲಿರುವ ಸಂಸದರ ಜನಸಂಪರ್ಕ ಕಾರ್ಯಾಲಯಕ್ಕೆ ತೆರಳಿದರು. ನಂತರ ಅಲ್ಲಿ ಸಿಹಿ ವಿತರಣೆ ನಡೆಯಿತು.
ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಕುರಡಗಿ, ಶಹರ ಬಿಜೆಪಿ ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇರ್ಷಾದ ಮಾನ್ವಿ, ಪ್ರಕಾಶ ಬಾಕಳೆ, ನಗರಸಭೆ ಮಾಜಿ ಸದಸ್ಯ ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ಎಂ.ಎಸ್. ಕರಿಗೌಡ್ರ, ಕಾಂತಿಲಾಲ ಬನ್ಸಾಲಿ, ವಿ.ಕೆ. ಗುರುಮಠ, ಶಿವನಗೌಡ ಶಿವನಗೌಡ್ರ, ಪಾರ್ವತಿ ಪತ್ತಾರ, ವಿಜಯಲಕ್ಷ್ಮಿ ಮಾನ್ವಿ, ಜಯಶ್ರೀ ಅಣ್ಣಿಗೇರಿ, ರತ್ನಾ ಕುರಕೋಡ, ಛಗನ್ ರಾಜಪುರೋಹಿತ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.