ಶಿರಹಟ್ಟಿ: ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯನ ಪಥ ಸಂಚಲನಕ್ಕೆ ಸಂಬಂಧಿಸಿದ ಹಬ್ಬವೇ ಸಂಕ್ರಮಣ ಅಥವಾ ಸಂಕ್ರಾಂತಿ. ರೈತರು ಕೃಷಿ ಉತ್ಪನ್ನಗಳ ಒಕ್ಕಲು ಮಾಡಿ ಕಾಳು ಕಡಿಯನ್ನು ಮನೆ ತುಂಬಿಸಿಕೊಳ್ಳುವ ಸಂಭ್ರಮದ ಹಬ್ಬ. ಸುಗ್ಗಿ ಹಾಗೂ ಎಳ್ಳು, ಬೆಲ್ಲ ಬೀರುವ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ತಾಲ್ಲೂಕಿನ ಜನತೆ ಸಿದ್ಧತೆ ನಡೆಸಿದ್ದಾರೆ.
ತಾಲ್ಲೂಕಿನ ಉತ್ತರ ಕರ್ನಾಟಕದ ಸಹ್ಯಾದ್ರಿ ಸಸ್ಯಕಾಶಿ ಕಪ್ಪತ್ತಗುಡ್ಡಕ್ಕೆ ಹೋಗಿ ಕಪ್ಪತ್ತ ಮಲ್ಲಯ್ಯನ ದರ್ಶನ ಪಡೆದುಕೊಂಡು ದೈವಿ ವನದಲ್ಲಿ ಬಂಧು-ಬಳಗ ಮತ್ತು ಸ್ನೇಹಿತರೊಂದಿಗೆ ಮನೆಯಿಂದ ತಂದ ಬುತ್ತಿ ಊಟವನ್ನು ಸವಿಯುತ್ತಾರೆ.
ಸಂಕ್ರಾತಿಯ ಪ್ರಯುಕ್ತ ನೂರಾರು ಭಕ್ತರು ಸಮೀಪದ ವರವಿ ಮೌನೇಶ್ವರನ ಅಂಬಲಿ ಹೊಂಡದಲ್ಲಿ ಹಾಗೂ ತಾಲ್ಲೂಕಿನ ಸಾಸಲವಾಡ ಗ್ರಾಮದ ಪೂರ್ವಕ್ಕೆ ತುಂಗಾಭದ್ರ ನದಿ ಹರಿಯುತ್ತಿದ್ದು, ನದಿಯ ಮಧ್ಯ ಇರುವ ಗಡ್ಡಿ ಬಸವೇಶ್ವರ ಹಾಗೂ
ವೀರಭದ್ರೇಶ್ವರ ದೇವಸ್ಥಾನಗಳಿದ್ದು, ಸಂಕ್ರಾಂತಿ ದಿನದಂದು ರಾಜ್ಯದ ಬಳ್ಳಾರಿ, ದಾವಣಗೆರಿ, ಹಾವೇರಿ ಮತ್ತು ಹುಬ್ಬಳ್ಳಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡುವುದಕ್ಕೆ ಬರುವುದು ವಿಶೇಷ.
ಈ ವರ್ಷ ಮಳೆ ಅಧಿಕವಾಗಿದ್ದು, ಗಡ್ಡಿ ಸುತ್ತಲೂ ಇರುವ ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರು ಹರಿಯುತ್ತಿರುವುದರಿಂದ ದೇವರ ದರ್ಶನ ಪಡೆಯುವುದು ಕಷ್ಟ ಎಂದು ಗ್ರಾಮದ ನಿವಾಸಿ ಸತೀಶ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.