ADVERTISEMENT

ಜಾನುವಾರು ಸಾಕಲು ಭೂಮಿಯೂ ಇಲ್ಲ!

ಅರಸೀಕೆರೆ ತಾಲ್ಲೂಕಿನ ಬಹುತೇಕ ಕಡೆ ಮಳೆ ಇಲ್ಲ; ಬಿತ್ತನೆಯೂ ಇಲ್ಲ

​ಪ್ರಜಾವಾಣಿ ವಾರ್ತೆ
Published 27 ಜುಲೈ 2013, 7:22 IST
Last Updated 27 ಜುಲೈ 2013, 7:22 IST
ತಾಲ್ಲೂಕಿನ ಕಣಕಟ್ಟೆ ಗ್ರಾಮದ ದೊಡ್ಡ ಕೆರೆ ಹನಿ ನೀರಿಲ್ಲದೆ ಭಣಗುಡುತ್ತಿದೆ.
ತಾಲ್ಲೂಕಿನ ಕಣಕಟ್ಟೆ ಗ್ರಾಮದ ದೊಡ್ಡ ಕೆರೆ ಹನಿ ನೀರಿಲ್ಲದೆ ಭಣಗುಡುತ್ತಿದೆ.   

ಅರಸೀಕೆರೆ: ಮಳೆಯೂ ಇಲ್ಲ. ಇತ್ತ ಬಿತ್ತನೆಯೂ ಇಲ್ಲ. ಈ ವರ್ಷವೂ ಮುಂಗಾರಿನ ಕತೆ ಮುಗಿಯಿತು ಎಂಬುದು ತಾಲ್ಲೂಕಿನ ರೈತರು ಆತಂಕ.ಬೆಳೆ ಇಲ್ಲದೇ, ಆದಾಯ ಇಲ್ಲದ ರೈತರಿಗೆ ಆಧಾರಸ್ತಂಭವಾಗಿರುವುದು ಹೈನುಗಾರಿಕೆ ಮಾತ್ರ. ನೀರು, ಮೇವಿನ ಕೊರತೆಯಲ್ಲಿ ಗೋವುಗಳನ್ನು ಸಾಕುವುದೂ ಈಚೆಗಿನ ದಿನಗಳಲ್ಲಿ ಕಷ್ಟವಾಗುತ್ತಿದೆ.

ಬರದ ಛಾಯೆಗೆ ಸಿಲುಕಿ ಐದಾರು ವರ್ಷಗಳಿಂದ ತಾಲ್ಲೂಕಿನ ರೈತರು ತೀವ್ರ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಪರಿ ಣಾಮ ಜಾನುವಾರು ಸಂಖ್ಯೆಯೂ ಇಳಿ ಮುಖಗೊಂಡಿದೆ. ಅಲ್ಲದೆ ಅವುಗಳ ಸಾಕಣೆ ದುಸ್ತರವಾಗಿದ್ದು, ಜಾನು ವಾರುಗಳು ಕಸಾಯಿಖಾನೆ ಪಾಲಾಗಿವೆ.


ಈಚಿನ ಅಂಕಿ-ಅಂಶಗಳ ಪ್ರಕಾರ ತಾಲ್ಲೂಕಿನಲ್ಲಿ ಜಾನುವಾರು ಸಂತತಿ ನಶಿಸುತ್ತಿರುವುದು ಸ್ಪಷ್ಟವಾಗಿದೆ. 2007ರಲ್ಲಿ ತಾಲ್ಲೂಕಿನಲ್ಲಿ ಹಸು, ಎಮ್ಮೆಗಳ ಸಂಖ್ಯೆ 1.12 ಲಕ್ಷ ಇದ್ದವು. 2012ರ ಆಕ್ಟೋಬರ್‌ನಲ್ಲಿ ನಡೆಸಿದ ಗಣತಿ ಪ್ರಕಾರ ಅವುಗಳ ಸಂಖ್ಯೆ ಒಂದು ಲಕ್ಷಕ್ಕಿಂತ ಕೆಳಗೆ ಇಳಿದಿದೆ.

ಸರ್ಕಾರದ ನಿರ್ಲಕ್ಷ್ಯ: ಮಳೆ ಬೆಳೆ ಕುಸಿತವೇ ಜಾನುವಾರುಗಳ ಸಂಖ್ಯೆ ಇಳಿಮುಖಗೊಳ್ಳಲು ಕಾರಣ. ಜತೆಗೆ ಸರ್ಕಾರದ ವಿವಿಧ ಇಲಾಖೆಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿರುವುದೂ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ. ಐದು ಸಾವಿರ ಜಾನುವಾರು ಗಳಿಗೆ ಒಂದು ಪ್ರಾಥಮಿಕ ಪಶು ಚಿಕಿತ್ಸಾಲಯ ಇರಬೇಕು. ಭೌಗೋಳಿ ಕವಾಗಿ 8 ಕಿ.ಮೀ ವ್ಯಾಪ್ತಿಯಲ್ಲಿ ಚಿಕಿತ್ಸಾಲಯ ಇರಲೇಬೇಕು.

ಕಾವಲು ಪ್ರದೇಶಕ್ಕೆ ನಿರ್ಬಂಧ: ತಾಲ್ಲೂಕಿನ ಸಾಕಷ್ಟು ಕೃಷಿ ಕುಟುಂಬಗಳು ಹಾಗೂ ಸಾವಿರಾರು ಜಾನುವಾರುಗಳಿಗೆ ತಿಪಟೂರು ತಾಲ್ಲೂ ಕಿನ ಕೊನೇಹಳ್ಳಿ ಬಳಿಯ ಅಮೃತ ಮಹಲ್ ಹಾಗೂ ಕಣಕಟ್ಟೆ ಕೆರೆ ಅಂಗಳದಲ್ಲಿರುವ ಕಾವಲ್‌ಗಳು ಆಧಾರವಾಗಿದ್ದವು. ಈಗ ಕಾವಲ್‌ಗಳು ಬಲಾಢ್ಯರ ಪಾಲಾಗಿ ಜಾನು ವಾರುಗಳನ್ನು ಮೇಯಿಸಲು ಜಾಗ ಇಲ್ಲದಂತಾಗಿದೆ.

ಕಾವಲ್ ಒಳಗೆ ಪ್ರವೇಶವೇ ಇಲ್ಲದೆ ಜಾನುವಾರುಗಳನ್ನು ಸಾಕುವುದೇ ಕಷ್ಟವಾಗಿ ರೈತರು ವಿಧಿಯಿಲ್ಲದೆ ಕಸಾಯಿಖಾನೆಗಳಿಗೆ ದೂಡುತ್ತಿದ್ದಾರೆ.

`ಮಳೆಯಾಗದಿದ್ದಲ್ಲಿ ಜಾನುವಾರು ರಕ್ಷಣೆಗೆ ಇಲಾಖೆ ಕ್ರಮ ಕೈಗೊಳ್ಳುವುದು. ಇದಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿ ಮೇವು ಖರೀದಿಗೆ ಮುಂದಾಗುತ್ತೇವೆ ಎಂದು ಕೇಶವಮೂರ್ತಿ ತಹಶೀಲ್ದಾರ್ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.