ADVERTISEMENT

ಮನಸೂರೆಗೊಂಡ ಭರತನಾಟ್ಯ

ಎಚ್.ಎಸ್.ಅನಿಲ್ ಕುಮಾರ್
Published 11 ಜನವರಿ 2014, 4:52 IST
Last Updated 11 ಜನವರಿ 2014, 4:52 IST

ಹಳೇಬೀಡು: ಸಿನಿಮಾ ಹಾಡುಗಳಿಗೆ ಕುಣಿಯುತ್ತ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುವ ಕಾಲದಲ್ಲಿಯೂ, ಪ್ರಸಿದ್ಧ ಕವಿಗಳು ರಚಿಸಿದ ಸಾಲುಗಳಿಗೆ ಹೆಜ್ಜೆ ಹಾಕಿ ವಿದ್ಯಾರ್ಥಿ ನೆರೆದವರ ಮನಗೆದ್ದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳ ಶಾಸ್ತ್ರೀಯ ನೃತ್ಯ ಪ್ರೇಕ್ಷಕರು ತಲೆದೂಗಿದರು.

ರಾಷ್ಟ್ರಕವಿ ಕುವೆಂಪು ಅವರ ‘ಆನಂದಮಯ ಈ ಜಗ ಹೃದಯ’ ಗೀತೆಗೆ ಮಕ್ಕಳು ಶಾಸ್ತ್ರೀಯವಾಗಿ ನೃತ್ಯ ಪ್ರದರ್ಶನ ಮಾಡಿದಾಗ ಸಭಿಕರು ಮಂತ್ರಮುಗ್ಧರಾದರು. ಗ್ರಾಮೀಣ ಮಕ್ಕಳ ಶಾಸ್ತ್ರಿಯ ಕಾಳಜಿಯನ್ನು ಕಂಡು ಬೆರಗಾದರು. ವೇದಿಕೆಯ ಸುತ್ತ ನೆರದಿದ್ದ ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸದಸ್ಯರು ಮಕ್ಕಳನ್ನು ಪ್ರೋತ್ಸಾಹಿಸಿದರು. ಭರತ ನಾಟ್ಯ ತರಬೇತಿ ಇಲ್ಲದ ಮಕ್ಕಳು ಶಿಕ್ಷಕರ ಸಹಕಾರದಿಂದ ವಿವಿಧ ಭಂಗಿಯ ನೃತ್ಯ ಕಲಿತು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಪ್ರದರ್ಶನವಾದ ಸಾಕಷ್ಟು ಸಿನಿಮಾ ಗೀತೆಗಳ ನೃತ್ಯಕ್ಕೆ ಪ್ರೇಕ್ಷಕರು ಶಿಳ್ಳೆ ಹಾಕಿ ಚಪ್ಪಾಳೆ ಹಾಕಿದರೂ, ಭರತನಾಟ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಗ್ರಾಮೀಣ ಪ್ರದೇಶದಲ್ಲಿ ನಶಿಸುತ್ತಿರುವ ಶಾಸ್ತ್ರೀಯ ನೃತ್ಯಕ್ಕೆ ಶಾಲೆಯಲ್ಲಿ ಪ್ರೋತ್ಸಾಹ ದೊರೆತಿರುವುದು ಶ್ಲಾಘನೀಯ ಎಂದು ಪೋಷಕರು ಸಂತಸಗೊಂಡರು.

ಮುಂಬರುವ ವರ್ಷದಿಂದ ಜಾನಪದ ಹಾಗೂ ಶಾಸ್ತ್ರೀಯ ಕಾರ್ಯಕ್ರಮಗಳಿಗೆ ಹೆಚ್ಚಿನ ಅವಕಾಶ ನೀಡಲಾಗುವುದು. ನಾಡಿನ ಪ್ರಸಿದ್ಧ ಕವಿಗಳ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡುವುದರಿಂದ ಕವಿ, ಸಾಹಿತಿಗಳ ಪರಿಚಯದೊಂದಿಗೆ ಸಾಹಿತ್ಯದ ವಿವಿಧ ಪ್ರರಾಕಾರಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಮೂಡುತ್ತದೆ ಎಂದು ಉಪ ಪ್ರಾಂಶುಪಾಲ ಮುಳ್ಳಯ್ಯ ತಿಳಿಸಿದರು.

‘ಹಿಂದಿನ ಜನರ ಜೀವನದಲ್ಲಿ ಜನಪದ ಹಾಸುಹೊಕ್ಕಾಗಿತ್ತು. ಜನಪದದೊಂದಿಗೆ ಜೀವನ ಸಾಗಿಸುತ್ತ ಅಂದಿನ ಜನರು ಕಷ್ಟಗಳನ್ನೆಲ್ಲ ಮರೆತು ನಗುವಿನೊಂದಿಗೆ ಕಷ್ಟದ ಬದುಕು ಕಟ್ಟಿಕೊಂಡಿದ್ದರು. ಮುಂದಿನ ಪಿಳೀಗೆಗೆ ಬದುಕಿನ ಪಾಠ ನೀಡಿದ ಜನಪದ ಉಳಿವಿಗೆ ಪ್ರಯತ್ನ ಮಾಡುತ್ತೆವೆ’ ಎಂಬುದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ. ವೀರಣ್ಣ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.