ADVERTISEMENT

‘ಮಾಧ್ಯಮಗಳು ನಿಷ್ಪಕ್ಷಪಾತವಾಗಿರಲಿ’

ಕಾರ್ಯಾಗಾರದಲ್ಲಿ ಕೆ.ಟಿ. ಕೃಷ್ಣೇಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 9:03 IST
Last Updated 5 ಏಪ್ರಿಲ್ 2018, 9:03 IST

ಹಾಸನ: ಸಮಾಜದ ಓರೆಕೋರೆ ತಿದ್ದುವ ಮಾಧ್ಯಮ ಹಾಗೂ ಪತ್ರಕರ್ತರು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗದೆ ಕಾರ್ಯನಿರ್ವಹಿಸಬೇಕು ಎಂದು ಸರ್ಕಾರಿ ಗೃಹವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕ ಕೆ.ಟಿ.ಕೃಷ್ಣೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಏರ್ಪಡಿಸಿದ್ದ ‘ಮತದಾನದ ಜಾಗೃತಿಯಲ್ಲಿ ಮಾಧ್ಯಮಗಳ ಪಾತ್ರ ಹಾಗೂ ಚಲನಚಿತ್ರ -ಚಿತ್ರಕಥೆ ತಯಾರಿಕಾ’ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಿಗೆ ಆಕರ್ಷಿತರಾಗು ತ್ತಿದ್ದಾರೆ. ಬೇರೆ ಎಲ್ಲ ವೃತ್ತಿಗಳಿಗಿಂತ ಮಾಧ್ಯಮ ವೃತ್ತಿ ಬಹಳ ವಿಶೇಷವಾ ದದ್ದು. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಈ ರೀತಿಯ ಕಾರ್ಯಾಗಾರ ಆಯೋಜಿಸುವುದು ಅರ್ಥಪೂರ್ಣ. ಪತ್ರಿಕೋದ್ಯಮ ಓದುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಭಾಷೆಯ ಮೇಲೆ ಹಿಡಿತ, ಸಮಯಪ್ರಜ್ಞೆ, ಎಲ್ಲಾ ಕ್ಷೇತ್ರದ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಾಧ್ಯಮ ಕ್ಷೇತ್ರವು ಸಮಾಜದ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ನೋಡುವ ಏಕೈಕ ಕ್ಷೇತ್ರವಾಗಿದೆ. ಭಾರತ ಕೃಷಿ ಪ್ರಧಾನವಾದ ದೇಶ. ರೈತರು ಯಾವುದೇ ಕಾರಣಕ್ಕೂ ಕೈಕಟ್ಟಿ ಕೂರುವುದಿಲ್ಲ. ಬೆಳೆ ಕೈಕೊಟ್ಟರೆ ಮತ್ತೆ ಬೆಳೆಯುವುದರ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದುತ್ತಾರೆ. ಅಂತೆಯೇ ಸತತ ಶ್ರಮದಿಂದ ಎಲ್ಲವನ್ನು ಸಾಧಿಸಬಹುದು. ಯುವ ಪೀಳಿಗೆ ಗಾಂಧಿಯುಗದ ಕನಸನ್ನು ನನಸು ಮಾಡಬೇಕು ಎಂದು ಹೇಳಿದರು.

ADVERTISEMENT

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯಆಯುಕ್ತ ಡಾ.ವೈ.ಎಸ್.ವೀರಭದ್ರಪ್ಪ ಮಾತನಾಡಿ, ಸಾಸಿವೆಯಷ್ಟು ವಿಚಾರವನ್ನು ಸಾಗರದಷ್ಟು ಬರೆಯುವ ಚಾಣಕ್ಯತನ ಪತ್ರಕರ್ತರಿಗಿರುತ್ತದೆ. 18 ವರ್ಷ ತುಂಬಿದವರಿಗೆ ದೇಹಕ್ಕೆ ಪ್ರೌಢತೆ ಇರುತ್ತದೆಯೇ ಹೊರತು ಮತದಾನ ಮಾಡುವಷ್ಟು ಪ್ರೌಢತೆ ಬಂದಿರುತ್ತದೆ ಎಂದು ಹೇಳಲಾಗದು. ಪ್ರಜೆಗಳಿಗಾಗಿಯೇ ಇರುವ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸರಿಯಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಹಿಂದೆ ಚುನಾವಣೆ ಸಂದರ್ಭದಲ್ಲಿ ಯಾವುದೇ ಆಮಿಷಗಳನ್ನು ಒಡ್ಡುತ್ತಿರಲಿಲ್ಲ. ಆದರೆ, ಪ್ರಸ್ತುತ ದಿನಗಳಲ್ಲಿ ಚುನಾವಣೆ ದಿನಾಂಕ ನಿಗದಿಯಾದರೆ ಹಣ, ಹೆಂಡ, ಒಡವೆಗಳನ್ನು ನೀಡಿ ಮತವನ್ನು ಕೀಳುವ ಪ್ರಯತ್ನ ನೆಡೆಯುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಎಚ್.ಕೆ.ದಿಲೀಪ್‌ಕುಮಾರ್, ಪಿ.ರವಿಕುಮಾರ್ ಕೆ.ಆರ್‌.ಸಂದೇಶ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಮೋಹನ್‌ಕುಮಾರ್, ಚಲನಚಿತ್ರ ನಿರ್ದೇಶಕ ಎಂ.ಜಿ. ವಿನಯ್‌ಕುಮಾರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾಂಚನಮಾಲಾ, ಆರ್.ಜಿ.ಗಿರೀಶ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸಿ.ಎಸ್. ಮಂಜುಳಾ, ಸೋನಿಕಾ, ಹರ್ಷಿತಾ, ಪೂರ್ಣಿಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.