ADVERTISEMENT

ರೈತರ ಆತ್ಮಹತ್ಯೆ ತಡೆಯದ ಸರ್ಕಾರ: ಟೀಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 5:55 IST
Last Updated 6 ಫೆಬ್ರುವರಿ 2012, 5:55 IST

ಹೊಳೆನರಸೀಪುರ: ಸರ್ಕಾರ ವರ್ಷಕ್ಕೆ ಲಕ್ಷ ಕೋಟಿ ಬಜೆಟ್ ಮಂಡಿಸಿದರೂ ರೈತರ ಆತ್ಮಹತ್ಯೆ, ನಗರ ಪ್ರದೇಶದ ವಲಸೆ ತಡೆಯಲು ಸಾಧ್ಯವಾಗಲಿಲ್ಲ ಎಂದು ಅರಕಲಗೂಡು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಯೋಗಾರಮೇಶ್ ಹೇಳಿದರು.

ತಾಲ್ಲೂಕು ವಚನ ಸಾಹಿತ್ಯ ಅಕಾಡೆಮಿ ಭಾನುವಾರ ಇಲ್ಲಿನ ಹೌಸಿಂಗ್ ಬೋರ್ಡ್ ಬಡಾವಣೆಯ ಉಪನ್ಯಾಸಕ ಕುಮಾರಯ್ಯ ಅವರ ಮನೆಯಲ್ಲಿ ಏರ್ಪಡಿಸಿದ್ದ ಮನೆ ಮನೆ ವಚನ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರ ಇಂತಹ ಸ್ಥಿತಿಗೆ ರೈತರ ನಿಲುವು ಕಾರಣ. ರೈತರ ಮನೆಯ ಯುವಕರಲ್ಲಿ ಹಣ ಇಲ್ಲ. ಆದರೂ ಅಯ್ಯಪ್ಪ, ಊರಹಬ್ಬ, ದೇವಿ ಹಬ್ಬಗಳನ್ನು ಸಾಲ ಮಾಡಿ ಸಂಭ್ರಮಿಸುತ್ತಾರೆ. ಮಳೆ ಬಿದ್ದಾಗ ಬೀಜ ಗೊಬ್ಬರ ಕೊಳ್ಳಲು ಹಣ ಇಲ್ಲದೆ ಪರಿ ತಪಿಸುತ್ತಾರೆ. ನಮ್ಮ ರೈತರ ಬದುಕು ಹಸನುಗೊಳಿಸಲು ವಚನ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಪತ್ರಕರ್ತರೂ ಸಹಕಾರ ನೀಡಬೇಕು ಎಂದರು.

ತಹಶೀಲ್ದಾರ್ ವಿ. ಮಂಜುನಾಥ್ ಮಾತನಾಡಿ, ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಎಲ್ಲರೂ ವಚನಗಳನ್ನು ಓದುವ ಕೇಳುವ ಹವ್ಯಾಸ ಬೆಳಸಿ ಕೊಳ್ಳಬೇಕು ಎಂದರು.

ನಿವೃತ್ತ ಶಿಕ್ಷಕ ವೀರಬಸಪ್ಪ, ಕೃಷ್ಣ ಆರ‌್ಮುಗಂ ಆಚಾರ್, ಶ್ರೀಹರ್ಷ ವಚನಗಾಯನ ಮಾಡಿದರು.
ತಾಲ್ಲೂಕು ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕುಮಾರಸ್ವಾಮಿ, ನಿವೃತ್ತ ಪ್ರಾಂಶುಪಾಲ ಪುಟ್ಟ ಸೋಮಪ್ಪ, ಅಣ್ಣಾಜಪ್ಪ, ಬಾ.ರಾ. ಸುಬ್ಬರಾಯ ಹಾಜರಿದ್ದು. ಶಿವಕುಮಾರಾಚಾರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.