ADVERTISEMENT

ವಿದ್ಯಾರ್ಥಿ ಸಾವು: ಬಸ್‌ಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2013, 19:59 IST
Last Updated 19 ಫೆಬ್ರುವರಿ 2013, 19:59 IST
ಅಪಘಾತದಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಸ್ಸಿಗೆ ಬೆಂಕಿ ಹಚ್ಚಿರುವುದು
ಅಪಘಾತದಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಸ್ಸಿಗೆ ಬೆಂಕಿ ಹಚ್ಚಿರುವುದು   

ಹಾಸನ: ತಾಲ್ಲೂಕಿನ ಕಟ್ಟಾಯದಿಂದ ಹಾಸನದತ್ತ ಹೊರಟಿದ್ದ ವಿದ್ಯಾರ್ಥಿಯೊಬ್ಬ ಕೆಎಸ್‌ಆರ್‌ಟಿಸಿ ಬಸ್ ಅಡಿ ಸಿಲುಕಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಘಟನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಎರಡು ಬಸ್ಸುಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದ್ದಾರೆ.

ಹಾಸನದ ಚನ್ನಾಂಬಿಕಾ ಐಟಿಐ ಕಾಲೇಜಿನ ಉಲ್ಲಾಸ್ ಮೃತ ವಿದ್ಯಾರ್ಥಿ.

ಬೆಳಿಗ್ಗೆ ಕಾಲೇಜಿಗೆ ಹೊರಟಿದ್ದ ಉಲ್ಲಾಸ್ ಬಸ್ ಹತ್ತುವಷ್ಟರಲ್ಲಿ ಅದು ಮುಂದಕ್ಕೆ ಚಲಿಸಿತು. ಆಯತಪ್ಪಿ ಆತ ಕೆಳಕ್ಕೆ ಬಿದ್ದ. ಆತನ ಮೇಲೆ ಬಸ್ಸಿನ ಹಿಂದಿನ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.  ಘಟನೆಯಿಂದ ಆಕ್ರೋಶಗೊಂಡ ಇತರ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರತಿಭಟನೆ ಆರಂಭಿಸಿದರು. ಎರಡು ಬಸ್‌ಗಳಿಗೆ ಬೆಂಕಿ ಹಚ್ಚಿದರು. ಮತ್ತೆರಡು ಬಸ್‌ಗಳ ಮೇಲೆ ಕಲ್ಲು ತೂರಿದರು. ಇದರಿಂದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾದವು. ಅಲ್ಲದೇ ಘಟನೆಗೆ ಕಾರಣವಾದ  ಬಸ್ ಚಾಲಕನನ್ನು ವಿದ್ಯಾರ್ಥಿಗಳು ಥಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಮೃತನ ಕುಟುಂಬಕ್ಕೆ ್ಙ50 ಸಾವಿರ ಪರಿಹಾರ ಕೊಡಿಸುವ ಹಾಗೂ ಕಟ್ಟಾಯ ಗ್ರಾಮಕ್ಕೆ ಮತ್ತಷ್ಟು ಬಸ್ಸುಗಳ ಸೌಲಭ್ಯದ ವ್ಯವಸ್ಥೆ ಮಾಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಅಂತ್ಯಗೊಳಿಸಲಾಯಿತು.

`ಘಟನೆಗೆ ಕಾರಣವಾದ ಬಸ್ ಚಾಲಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ' ಎಂದು ಹಾಸನ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.