ADVERTISEMENT

‘ಹಸಿರುವನ’ ಅಭಿವೃದ್ಧಿಗೆ ಚಾಲನೆ

ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರ ಆವರಣದ 50 ಕೇಂದ್ರದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 29 ಮೇ 2018, 12:38 IST
Last Updated 29 ಮೇ 2018, 12:38 IST
ಹಾಸನ ನಗರ ಸಮೀಪದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಸುಮಾರು 50 ಎಕರೆ ಪ್ರದೇಶಲ್ಲಿ ಸಸಿ ನೆಡಲಾಯಿತು
ಹಾಸನ ನಗರ ಸಮೀಪದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಸುಮಾರು 50 ಎಕರೆ ಪ್ರದೇಶಲ್ಲಿ ಸಸಿ ನೆಡಲಾಯಿತು   

ಹಾಸನ: ‘ಪರಿಸರ ಸಂರಕ್ಷಣೆ ಹಾಗೂ ಅರಣ್ಯೀಕರಣದ ಬಗ್ಗೆ ವಿಶೇಷವಾಗಿ ಶ್ರಮಿಸುತ್ತಿರುವ ಹಸಿರುಭೂಮಿ ಪ್ರತಿಷ್ಠಾನ ಹಾಗೂ ಯಾವುದೇ ಸಂಘ ಸಂಸ್ಥೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮಬಾಬು ಹೇಳಿದರು.

ಸಮೀಪದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ 50 ಎಕರೆ ಪ್ರದೇಶದಲ್ಲಿ ‘ಹಸಿರುವನ’ ನಿರ್ಮಿಸಲು ಅರಣ್ಯ ಇಲಾಖೆ, ಹೇಮಗಂಗೋತ್ರಿ ಸಿಬ್ಬಂದಿ, ಹಸಿರುಭೂಮಿ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.

ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪುಟ್ಟಸ್ವಾಮಿ ಅವರು, ಸಂಸ್ಥೆಯ ಆವರಣದಲ್ಲಿ ‘ಹಸಿರುವನ’ ಅಭಿವೃದ್ಧಿ ಒಳ್ಳೆಯ ಬೆಳವಣಿಗೆ. ವನದ ಒಂದು ಭಾಗದಲ್ಲಿ ಬುರುಡಾಳು ಬೋರೆ ಅರಣ್ಯ ರಕ್ಷಣೆ ಇದೆ. ಮತ್ತೊಂದೆಡೆ ಸುತ್ತುಗೋಡೆ ಹಾಕಿಸಲಾಗಿದೆ. ಇನ್ನೊಂದು ಭಾಗದಲ್ಲಿ ಕಂದಕ ತೆಗೆದು, ಸುತ್ತಲೂ ತಂತಿ ಹಾಕಿಸಲಾಗುವುದು. ನಗರಕ್ಕೆ ಸಮೀಪದಲ್ಲಿ ಜೀವ ವೈವಿಧ್ಯದ ಉದ್ಯಾನವನ ನಿರ್ಮಾಣಗೊಳ್ಳಲಿದೆ. ಇಲ್ಲಿ ಕಾರೆ ಮತ್ತಿತರ ಅನೇಕ ಕಾಡು ಹಣ್ಣುಗಳ ಗಿಡಗಳಿದ್ದು, ಅವುಗಳನ್ನು ಉಳಿಸಿಕೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

ಎಚ್‌ಪಿಸಿಎಲ್‌ ಸಂಸ್ಥೆ ಪುನಶ್ಚೇತನ ಗೊಳಿಸುತ್ತಿರುವ ಗವೇನಹಳ್ಳಿ ಕೆರೆಯ ಮಧ್ಯ ಭಾಗದ ದ್ವೀಪದಲ್ಲಿ ಪಕ್ಷಿಗಳಿಗೆ ಅನುಕೂಲವಾಗುವಂತೆ ಕಾಡಿನ ಹಣ್ಣು ನೀಡುವ ವಿವಿಧ ತಳಿಯ ಮರಗಳನ್ನು ಬೆಳೆಸಲು ಪ್ರತಿಷ್ಠಾನದ ಸದಸ್ಯರು ಹಾಗೂ ಎಂ.ಕೃಷ್ಣ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 60ಕ್ಕೂ ಹೆಚ್ಚು ಗುಂಡಿ ತೆಗೆದಿದ್ದು, ಮಂಗಳವಾರ ಸಸಿ ನೆಡಲಾಗುವುದೆಂದು ಪ್ರತಿಷ್ಠಾನದ ರೂಪ ಹಾಸನ ತಿಳಿಸಿದರು.

ವಲಯ ಅರಣ್ಯಾಧಿಕಾರಿ ಜಗದೀಶ್, ಪ್ರತಿಷ್ಠಾನದ ಪದಾಧಿಕಾರಿಗಳಾದ ಆರ್.ಪಿ.ವೆಂಕಟೇಶಮೂರ್ತಿ, ಎಸ್.ಎಸ್. ಪಾಷಾ, ರೂಪ ಹಾಸನ, ತಿರುಪತಿಹಳ್ಳಿ ಶಿವಶಂಕರಪ್ಪ, ಎಸ್.ಪಿ. ರಾಜೀವೇಗೌಡ, ಅನುಗನಾಳು ಕೃಷ್ಣಮೂರ್ತಿ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮನುಕುಮಾರ್, ಸಂಜೀವಿನಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.