ADVERTISEMENT

‘ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಗಮನ ನೀಡಿ’

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 6:52 IST
Last Updated 18 ಸೆಪ್ಟೆಂಬರ್ 2013, 6:52 IST

ಹಾಸನ: ‘ನಗರದ ಹಾಸನ ವೈದ್ಯಕೀಯ ಮಹಾ ವಿದ್ಯಾಲಯದ ಆಸ್ಪತ್ರೆ ಸ್ವಚ್ಚತೆ ಹಾಗೂ ಸೌಲಭ್ಯದ ದೃಷ್ಟಿಯಿಂದ ಉತ್ತಮವಾಗಿದೆ, ಆದರೆ ಇಲ್ಲಿ ಇನ್ನಷ್ಟು ಉತ್ತಮ ರೀತಿಯಿಂದ ಸೇವೆ ನೀಡ ಬಹುದು’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಜಿಲ್ಲಾ ಆಸ್ಪತ್ರೆಯ ಪ್ರತಿ ವಿಭಾಗಕ್ಕೂ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿ ಮಾತನಾಡಿದರು.
‘ಇತರ ಸರ್ಕಾರಿ ಆಸ್ಪತ್ರೆಗಳಿಗೆ ಹೋಲಿಸಿದರೆ ಇಲ್ಲಿ ಉತ್ತಮ ವ್ಯವಸ್ಥೆಗಳಿವೆ. ಇಲ್ಲಿಗೆ ಕೆಲವು ತಜ್ಞ ವೈದ್ಯರು ಹಾಗೂ ಅಗತ್ಯ ಹೆಚ್ಚುವರಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸೌಜನ್ಯ ದಿಂದ ವರ್ತಿಸಿ ಉತ್ತಮ ಸೇವೆ ಒದಗಿಸಬೇಕು’ ಎಂದು ಸಲಹೆ ನೀಡಿದರು.

ಐ.ಸಿ.ಯು. ಶಸ್ತ್ರ ಚಿಕಿತ್ಸಕರ ಕೊಠಡಿ, ಅಪೌಷ್ಠಿಕ ಮಕ್ಕಳ ಚಿಕಿತ್ಸಾ ಕೇಂದ್ರ, ಆಪ್ತ ಸಮಾಲೋಚನಾ ಕೊಠಡಿ, ಅಪಘಾತ ವಿಭಾಗ, ಸಾಮಾನ್ಯ ಒಳರೋಗಿಗಳ ವಿಭಾಗ, ವೆಂಟಿಲೇಟರ್ ಕೇಂದ್ರ ಸೇರಿದಂತೆ ಹಲವು ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಸಲಿಸಿ ವೈದ್ಯಧಿಕಾರಿಗಳಿಂದ ಅವರು ಮಾಹಿತಿ ಪಡೆದರು.

ಆಸ್ಪತ್ರೆಯಲ್ಲಿ ಲಭ್ಯವಿರುವ ವೈದ್ಯಕೀಯ ಸೇವೆಗಳು, ಸ್ವಚ್ಛತೆ, ಒಳರೋಗಿಗಳಿಗೆ ನೀಡಲಾಗುತ್ತಿರುವ  ಊಟೋಪಚಾರ, ಔಷಧ ವಿತರಣೆ ವ್ಯವಸ್ಥೆಗಳನ್ನೂ ಅವರು ಪರಿಶೀಲಿಸಿದರು.

ಹಿಮ್ಸ್‌ ನಿರ್ದೇಶಕ ಡಾ.ರಾಚೇಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಂಕರ್, ತಹಶೀಲ್ದಾರ ಮಂಜುನಾಥ್ ಮಾನವ ಹಕ್ಕುಗಳ ಆಯೋಗದ ರಿಜಿಸ್ಟ್ರಾರ್ ಕೆ.ಎಚ್.ಮಲ್ಲೇಶ್ ಮತ್ತಿತರರು ಹಾಜರಿದ್ದರು.

ಇದಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ, ನಗರ ಸಭೆ ಆಯುಕ್ತ ನಾಗಭೂಷಣ್, ಉಪ ವಿಭಾಗಾಧಿಕಾರಿ ಶರತ್, ಐ.ಎ.ಎಸ್.ಪ್ರೊಬೆಷನರಿ ರಾಮಚಂದ್ರನ್, ತಹಶೀಲ್ದಾರ ಮಂಜುನಾಥ್, ಹುನುಗುಂದ ಅವರನ್ನು ಭೇಟಿ ಮಾಡಿ ಸಮಲೋಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.