ADVERTISEMENT

‘ಮಲೆನಾಡು ಸಂಸ್ಥೆ ವಿರುದ್ಧ ಅಪಪ್ರಚಾರ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 9:52 IST
Last Updated 3 ಜನವರಿ 2014, 9:52 IST

ಹಾಸನ: ‘ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಆಡಳಿತ ಮಂಡಳಿಯಲ್ಲಿರುವ ಕೆಲವರು ಅಧಿಕಾರ ಲಾಲಸೆಯಿಂದ ಸಂಸ್ಥೆಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ’ ಎಂದು ಮಂಡಳಿಯ ನಿರ್ದೇಶಕರಲ್ಲೊಬ್ಬರಾದ ಬಿ.ಆರ್‌. ಗುರುದೇವ್‌ ಆರೋಪಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ‘ಅಶೋಕ ಹಾರನಹಳ್ಳಿ ಸಮಿತಿಯ ಆಯ್ಕೆಯಾದ ಅಧ್ಯಕ್ಷರೇ ವಿನಾ ನಾಮನಿರ್ದೇಶಿತ ಅಧ್ಯಕ್ಷರಲ್ಲ. ಸಂಸ್ಥೆಯ ಅಧ್ಯಕ್ಷರಾಗಿ ಮುಂದುವರಿಯುವ ಹಕ್ಕು ಅವರಿಗೆ ಇದೆ. ಹಿರಿಯ ಮುಖಂಡ ಬಿ.ಬಿ. ಶಿವಪ್ಪ ನೇತೃತ್ವದಲ್ಲಿ ಈಚೆಗೆ 13 ಮಂದಿ ನಿರ್ದೇಶಕರು ಸಭೆ ನಡೆಸಿದ್ದು ನಿಜ.

ಅದರಲ್ಲಿ ಕಾಲೇಜಿನ ಅಭಿವೃದ್ಧಿ ಬಗ್ಗೆ ಚರ್ಚೆಯಾಗಿದೆಯೇ ವಿನಾ ಅಶೋಕ ಹಾರನಹಳ್ಳಿ ಅವರನ್ನು ಬದಲಿಸುವ ಬಗಗೆ ಚರ್ಚೆ ಆಗಿಲ್ಲ ಎಂದರು. 2007ರಲ್ಲಿ ಸಂಸ್ಥೆಯಲ್ಲಿ 2.63 ಕೋಟಿ ರೂಪಾಯಿ ಇತ್ತು. ಹಾರನಹಳ್ಳಿ ಅಧ್ಯಕ್ಷರಾದ ಮೇಲೆ ಈಗ 35.04 ಕೋಟಿ ರೂಪಾಯಿ ಇದೆ. ಈ ಹಣ ಠೇವಣಿ ಇಡಲಾಗಿದ್ದು, ಅಭಿವೃದ್ಧಿಗೆ ಬಳಸಲಾಗುವುದು ಎಂದರು.

‘ಕಾಲೇಜಿನಲ್ಲಿ ಯಾವುದೇ ಗೊಂದಲ ಆದರೆ ಪ್ರತಿಕ್ರಿಯೆ ನೀಡಬೇಕಾದ ಜವಾಬ್ದಾರಿ ಪ್ರಾಂಶುಪಾಲರ ಮೇಲೆ ಇದೆ. ಮಧ್ಯಮದವರಿಗೆ ಅವರು ಪ್ರತಿಕ್ರಿಯೆ ನೀಡದಿದ್ದರೆ ಆ ಬಗ್ಗೆ ಅವರಲ್ಲಿ ಸ್ಪಷ್ಟನೆ ಕೇಳುತ್ತೇನೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಶೋಷಣೆ ನಡೆಯುತ್ತಿದೆ ಎಂಬ ವಿಚಾರ ಈಗ ಗಮನಕ್ಕೆ ಬಂದಿದೆ. ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ’ ಎಂದರು. ನಿರ್ದೇಶಕರಲ್ಲೊಬ್ಬರಾದ ಕೆಂಚಪ್ಪ ಶಿವಣ್ಣ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT