ADVERTISEMENT

‘ಸಹಕಾರ ಬ್ಯಾಂಕಿಗೆ `406 ಲಕ್ಷ ನಿವ್ವಳ ಲಾಭ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 8:35 IST
Last Updated 25 ಸೆಪ್ಟೆಂಬರ್ 2013, 8:35 IST

ಹಾಸನ: ‘ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ 2012–13ನೇ ಸಾಲಿನಲ್ಲಿ ರೂ 406.22 ಲಕ್ಷ ನಿವ್ವಳ ಲಾಭ ಗಳಿಸಿ ಆಡಿಟ್‌ ವರ್ಗಿಕರಣದಲ್ಲಿ ‘ಎ’ ಶ್ರೇಣಿ ಪಡೆದುಕೊಂಡಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಸಿ.ಎನ್‌. ಬಾಲಕೃಷ್ಣ ತಿಳಿಸಿದರು.

ನಗರದ ಜಿಲ್ಲಾ ಸಹಕಾರ ಬ್ಯಾಂಕ್‌ ಸಭಾಂಗಣದಲ್ಲಿ ನಡೆದ 55ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘2012–13ನೇ ಸಾಲಿನಲ್ಲಿ ಬ್ಯಾಂಕಿನಿಂದ 2510 ಸ್ವ ಸಹಾಯ ಗುಂಪುಗಳಿಗೆ ವಿವಿಧ ಉದ್ದೇಶಕ್ಕಾಗಿ 3587.06 ಲಕ್ಷ ರೂಪಾಯಿ ಸಾಲ ನೀಡಿ ಶೇ 98 ವಸೂಲಾತಿ ಮಾಡಲಾಗುತ್ತಿದೆ. ಸ್ವ ಸಹಾಯ ಸಂಘಗಳಿಗೆ 3741.45 ಲಕ್ಷ ರೂಪಾಯಿ ಸಾಲದ ಹೊರಬಾಕಿ ನೀಡಲಾಗಿದೆ. ಬ್ಯಾಂಕ್‌ನಲ್ಲಿ ಕೋರ್‌ ಬ್ಯಾಂಕಿಂಗ್‌ ತಂತ್ರಜ್ಞಾನ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಗ್ರಾಹಕರು ಯಾವುದೇ ಶಾಖೆಗಳಲ್ಲಿ ವ್ಯವಹಾರ ನಡೆಸಬಹುದಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮಾತ್ರ ಸಂಪೂರ್ಣ ಕೋರ್‌ ಬ್ಯಾಂಕಿಂಗ್‌ ಹೊಂದಿದ್ದು, ಈ ಪೈಕಿ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕೂಡ ಒಂದಾಗಿದೆ. ಗ್ರಾಹಕರಿಗೆ ಎ.ಟಿ.ಎಂ. ಮೂಲಕ ವ್ಯವಹರಿಸಲು ಅನುಕೂಲ­ವಾಗುವಂತೆ ಎರಡು ಎ.ಟಿ.ಎಂ. ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಪಟೇಲ್‌ ಶಿವರಾಮ್‌, ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಕಾರ್ಲೆ ಇಂದ್ರೇಶ್‌ ಹಾಗೂ ಬ್ಯಾಂಕಿನ ಅಧಿಕಾರಿಗಳು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.