ಚನ್ನರಾಯಪಟ್ಟಣ: ತಾಲ್ಲೂಕಿನ ಕಬ್ಬಳಿ ಹಾಗೂ ದಿಡಗ ಗ್ರಾಮಪಂಚಾಯಿತಿ ವ್ಯಾಪ್ತಿಯ 22 ಕೆರೆಗಳಿಗೆ ನೀರು ಹರಿಸುವ ಸಂಬಂಧ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಶಾಲಿನಿ ವಿದ್ಯಾಶಾಲೆ, ಭೂಮಿ ಉಳಿಸಿ ಆಂದೋಲನಾ ಸಮಿತಿ, ಸ್ನೇಹಬಳಗ, ಮಕ್ಕಳ ಸಾಹಿತ್ಯ ಪರಿಷತ್, ವಿವೇಕಾನಂದ ಯೋಗ ಕೇಂದ್ರದ ಸಹಯೋಗದಲ್ಲಿ ಶನಿವಾರ ಹಸಿರು ಹಬ್ಬದ ಅಂಗವಾಗಿ ಗಿಡ ವಿತರಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರೇಹಳ್ಳಿ ಸಮೀಪ ಇರುವ ಪಾಪನಕಟ್ಟೆಯಿಂದ ನೀರು ಹರಿಸ ಲಾಗುವುದು. ಈ ಯೋಜನೆ ಪೂರ್ಣ ಗೊಂಡರೆ ತಾಲ್ಲೂಕಿನ ಬಹುತೇಕ ಕೆರೆಗಳಿಗೆ ನೀರು ಹರಿಸಿದಂತಾಗುತ್ತದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ 7-8 ಸಾವಿರ ಕೃಷಿ ಹೊಂಡ ನಿರ್ಮಿಸಲಾಗಿದೆ. ಜೊತೆಗೆ ಚೆಕ್ ಡ್ಯಾಂ ಮತ್ತು ಬದುಗಳನ್ನು ನಿರ್ಮಿಸಿ ಅಂತರ್ಜಲ ವೃದ್ಧಿಗೆ ಒತ್ತು ನೀಡಲಾಗಿದೆ. ರಕ್ತ ಚಂದನ, ಶ್ರೀಗಂಧಕ್ಕೆ ಹೆಚ್ಚು ಬೇಡಿಕೆ ಇದೆ. ಈ ಗಿಡಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಬೇಕು ಎಂದರು.
ಆದಿಚುಂಚನಗಿರಿ ಶಾಖಾ ಮಠಾಧೀಶ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಅರಣ್ಯ ಸಂಪತ್ತಿನಿಂದ ಪರಿಸರ ಸಂರಕ್ಷಣೆ ಸಾಧ್ಯ. ಪರಿಸರವಾದಿ ಸಿ.ಎನ್.ಅಶೋಕ್ ಅವರ ತೋಟದಲ್ಲಿ ಬೆಳೆದ ಗಿಡಗಳನ್ನು ಪ್ರತಿವರ್ಷ ಸಾವಿರಾರು ಜನರಿಗೆ ಉಚಿತ ವಾಗಿ ವಿತರಣೆ ಮಾಡುತ್ತಿದ್ದಾರೆ. ಪಡೆದ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡಬೇಕು ಎಂದು ನುಡಿದರು.
ವೃಕ್ಷಾಧರಿತ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪರಿಸರವಾದಿ ಸಿ.ಎನ್.ಅಶೋಕ್ ಹೇಳಿದರು.
ಡಿವೈಎಸ್ಪಿ ಬಿ.ಬಿ.ಲಕ್ಷ್ಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜೆ.ಸೋಮನಾಥ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ಪ್ರಕಾಶ್ ಜೈನ್, ಶಾಲಿನಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಿ.ಎನ್.ನಂಜುಂಡೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.