ಅರಕಲಗೂಡು: ದೊಡ್ಡಮ್ಮ ದೇವಿ ಕಲಾ ಮತ್ತು ಸಾಂಸ್ಕೃತಿಕ ಸಂಘವು ಫೆ. 13ರಿಂದ 20ರವರೆಗೆ ರಾಜ್ಯಮಟ್ಟದ ಪೌರಾಣಿಕ ಹಗಲು ನಾಟಕೋತ್ಸವವನ್ನು ಏರ್ಪಡಿಸಿದೆ.
‘ಪಟ್ಟಣದ ಕ್ರೀಡಾಂಗಣದಲ್ಲಿ ಪ್ರತಿದಿನ ಬೆಳಿಗ್ಗೆ 10.30 ರಿಂದ ರಾತ್ರಿ 10 ಗಂಟೆಯವರೆಗೆ ನಾಟಕಗಳ ಪ್ರದರ್ಶನ ನಡೆಯಲಿದ್ದು ರಾಜ್ಯದ ವಿವಿಧ ಜಿಲ್ಲೆಯಿಂದ ತಂಡಗಳು ಬಂದು ನಾಟಕ ಪ್ರದರ್ಶಿಸಲಿವೆ’ ಎಂದು ದೊಡ್ಡಮ್ಮ ದೇವಿ ಕಲಾ ಸಂಘದ ಕಾರ್ಯದರ್ಶಿ ಜಿ.ಜಿ.ಕೇಶವ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ಸಂಘದ ಸದಸ್ಯರಲ್ಲಿ ಬಹಳಷ್ಟು ಜನ ಪೌರಾಣಿಕ ನಾಟಕ ಕಲಾವಿದರಾಗಿದ್ದು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಸಂಘ ಗುರುತಿಸಿಕೊಂಡಿದ್ದು ಸಂಘದ ಸದಸ್ಯರ ಆಸಕ್ತಿಯ ಫಲವಾಗಿ ಈ ನಾಟಕೋತ್ಸವ ಏರ್ಪಡಿಸಲಾಗಿದೆ. ರಂಗಕ್ಷೇತ್ರದಲ್ಲಿ ಇದೊಂದು ವಿಭಿನ್ನ ಪ್ರಯೋಗವಾಗಿ ಮೂಡಿಬರಲಿದೆ. ಪ್ರತಿನಿತ್ಯ ಹಿರಿಯ ಕಲಾವಿದರು ಮತ್ತು ರಂಗ ನಿರ್ದೇಶಕರನ್ನು ಗೌರವಿಸಲಾಗುವುದು. ಫೆ. 13ರಂದು ನಡೆಯುವ ಉದ್ಘಟನಾ ಕಾರ್ಯಕ್ರಮದಲ್ಲಿ ಶಾಸಕ ಎ.ಟಿ.ರಾಮಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಪಾಲ್ಗೊಳ್ಳುವರು’ ಎಂದರು.
‘ಫೆ. 13ರಂದು ಪಟ್ಟಣದ ಶನೇಶ್ವರ ಕಲಾ ತಂಡದವರಿಂದ ‘ರಾಜಾ ಸತ್ಯವ್ರತ’ ಅರ್ಥಾತ್ ‘ಶನಿ ಪ್ರಭಾವ’, ಫೆ. 14ರಂದು ಮಂಡ್ಯ ಜಿಲ್ಲೆ ನೇರಲಗೆರೆಯ ಶಂಭುಲಿಂಗೇಶ್ವರ ಕಲಾ ತಂಡದವರಿಂದ ‘ದಕ್ಷಯಜ್ಞ’, ಫೆ. 15ರಂದು ಅರಕಲಗೂಡು ದೊಡ್ಡಮ್ಮ ದೇವಿ ಕಲಾ ತಂಡದಿಂದ ‘ಕುರುಕ್ಷೇತ್ರ’, ಫೆ. 16ರಂದು ಬೆಂಗಳೂರು ಅನೇಕಲ್ನ ಗಡಿನಾಡು ರಂಗಭೂಮಿ ಕಲಾವಿದರ ಸಂಘದಿಂದ ‘ದಕ್ಷಯಜ್ಞ’, ಫೆ. 17ರಂದು ಮೈಸೂರಿನ ಹೆಬ್ಬಾಳ್ ಸಾಂಸ್ಕೃತಿಕ ವೇದಿಕೆಯವರಿಂದ ‘ಧರ್ಮ ರಾಜ್ಯ ಸ್ಥಾಪನೆ’, ಫೆ. 18ರಂದು ತಾಲ್ಲೂಕಿನ ಬಿದರೂರು ಗ್ರಾಮದ ಬಸವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿಯವರಿಂದ ‘ಶ್ರೀಕೃಷ್ಣ ಸಂಧಾನ’ ನಾಟಕಗಳು ಪ್ರದರ್ಶಿತವಾಗಲಿದೆ’ ಎಂದು ಮಾಹಿತಿ ನೀಡಿದರು.
ಸಂಘದ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷ ರಾಜೇಗೌಡ, ರಂಗ ನಿರ್ದೇಶಕ ಬಸವರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.