ಅರಸೀಕೆರೆ: ಬುದ್ದ, ಬಸವ, ಡಾ. ಬಿ. ಆರ್. ಅಂಬೇಡ್ಕರ್ ಅವರ ತತ್ವ, ಆದರ್ಶಗಳೇ ಶ್ರೇಷ್ಠ ಎಂದು ಚಿತ್ರದುರ್ಗದ ಐಮಂಗಲ ಹರಳಯ್ಯ ಗುರುಪೀಠದ ಪೀಠಾಧಿಪತಿ ಬಸವ ಹರಳಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ತಾಲ್ಲೂಕಿನ ಕಣಕಟ್ಟೆ ಹೋಬಳಿಯ ರಾಂಪುರ ಗ್ರಾಮದ ಕರಿಯಮ್ಮ ದೇಗುಲದ ಪ್ರಾರಂಭೋತ್ಸವ, ಕಳಸಾರೋಹಣ, ಕುಂಬಾಭಿಷೇಕ, ದೇವಿಯ ನೂತನ ವಿಗ್ರಹದ ಪ್ರತಿಷ್ಠಾಪನೆ, ದೃಷ್ಟಿ ಪೂಜೆ ಸಂದರ್ಭ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ವಿಶ್ವಗುರು ಬಸವೇಶ್ವರರು ನ್ಯಾಯಾಂಗವಾದರು, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಕಾರ್ಯಾಂಗವಾಗಿ ಕಾಲಕ್ಕನುಗುಣವಾಗಿ ದೈವತ್ವವಾದರು ಎಂದರು.
ಶಾಸಕ ಕೆ. ಎಂ. ಶಿವಲಿಂಗೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದ , 12 ನೇ ಶತಮಾನದಲ್ಲೇ ಬಸವಣ್ಣನವರ ಅನುಭವ ಮಂಟಪವು ಜಾತ್ಯತೀತ ವ್ಯವಸ್ಥೆಯಾಗಿ ರೂಪುಗೊಂಡಿತ್ತು, ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿಯಾಯಿತು. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಮುನ್ನೆಲೆಗೆ ಬರಬೇಕು ಎಂದರು.
‘ನಾನು ಇನ್ನೂ 15 ವರ್ಷ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ, ಯಾರಿಗೋ ಹೆದರಿ ದೂರ ಸರಿಯುವುದಿಲ್ಲ ನನ್ನಲ್ಲಿ ಒಳ ರಾಜಕಾರಣ ಇಲ್ಲ ಎಂದರು. ವಿಧಾನಸಭಾ ಕ್ಷೇತ್ರದ ಎಲ್ಲಾ ಕೆರೆಗಳಿಗೆ ನದಿ ನೀರನ್ನು ತುಂಬಿಸುವುದು ನನ್ನ ಗುರಿಯಾಗಿದೆ ಎಂದರು.
ಮಾಡಾಳು ವಿರಕ್ತಮಠದ ರುದ್ರಮುನಿ ಸ್ವಾಮೀಜಿ ಹಾಗೂ ದೊಡ್ಡ ಮೇಟಿಕುರ್ಕೆ ಬೂದಿಹಾಳ್ ವಿರಕ್ತಮಠದ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಧರ್ಮಶೇಖರ್ ಗೀಜಿಹಳ್ಳಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಮೂರ್ತಿ ಗುತ್ತಿನಕೆರೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾಡಾಳು ಸ್ವಾಮಿ, ಉದ್ಯಮಿ ರಾಜ್ ಕೃಷ್ಣಮೂರ್ತಿ ಮಾತನಾಡಿದರು.
ದೇವಾಲಯದಲ್ಲಿ ವಿಶೇಷ ಪೂಜೆ ,ಹೋಮ, ಧಾರ್ಮಿಕ ವಿಧಿ ಗಳು ನೆರವೇರಿದವು, ಅನ್ನಸಂತರ್ಪಣೆ ನೆರವೇರಿತು. ರಾಂಪುರ ಗ್ರಾಮ ಪಂಚಾಯಿತಿ ಹಾಲಿ ಅಧ್ಯಕ್ಷೆ ಶಶಿಕಲಾ ಚನ್ನಪ್ಪ, ಉಪಾಧ್ಯಕ್ಷೆ ಪವಿತ್ರ ಸುರೇಶ್,ಮಾಜಿ ಅಧ್ಯಕ್ಷ ಆರ್. ಈ. ಸುರೇಶ್, ಮಾಜಿ ಉಪಾಧ್ಯಕ್ಷೆ ಗಂಗಮ್ಮ ರಂಗಪ್ಪ, ದಲಿತ ಮುಖಂಡರಾದ ಕರಿಯಪ್ಪ ನಾಗವೇದಿ, ಮಂಜುನಾಥ್ ಸಂಕೋಡನಹಳ್ಳಿ, ಮಂಜುನಾಥ್ ಮಲ್ಲಿದೇವಿಹಳ್ಳಿ ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.