ADVERTISEMENT

7ರಂದು ಬಿಎಸ್‌ಪಿ ಪದಾಧಿಕಾರಿಗಳ ಸಮಾವೇಶ

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ನಿರ್ಧಾರವಾಗಿಲ್ಲ: ಗಂಗಾಧರ್‌

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 17:16 IST
Last Updated 4 ಜನವರಿ 2019, 17:16 IST
ಗಂಗಾಧರ್‌
ಗಂಗಾಧರ್‌   

ಹಾಸನ: ಲೋಕಸಭಾ ಚುನಾವಣೆ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಜ.7ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಹುಜನ ಸಮಾಜವಾದಿ ಪಕ್ಷದ ಪದಾಧಿಕಾರಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್‌ಪಿ ರಾಜ್ಯ ಘಟಕದ ಕಾರ್ಯದರ್ಶಿ ಡಿ.ಎಸ್.ಗಂಗಾಧರ್ ಬಹುಜನ್ ಹೇಳಿದರು.

ಅಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ರಾಜ್ಯಸಭಾ ಸದಸ್ಯ ಅಶೋಕ್ ಸಿದ್ದಾರ್ಥ ಕಾರ್ಯಕ್ರಮ ಉದ್ಘಾಟಿಸುವರು. ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಪ್ರೊ. ಹರಿರಾಮ್ ಅಧ್ಯಕ್ಷತೆ ವಹಿಸಲಿದ್ದು, ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಸಂಯೋಜಕ ಎಂ.ಎಲ್.ತೋಮರ್, ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಶಾಸಕ ಎನ್.ಮಹೇಶ್ ಇತರರು ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ - ಬಿಎಸ್‌ಪಿ ಮೈತ್ರಿ ಮಾಡಿಕೊಂಡಿತ್ತು. 224 ರಲ್ಲಿ 20 ಕ್ಷೇತ್ರಗಳನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಬಿಎಸ್‌ಪಿಗೆ ಬಿಟ್ಟುಕೊಟ್ಟಿದ್ದರು. ಅದೇ ರೀತಿಯ ಒಪ್ಪಂದ ಲೋಕಸಭೆ ಚುನಾವಣೆಗೂ ಅನ್ವಯಿಸುತ್ತದೆ ಎಂಬುದರ ಕುರಿತು ಮೇಲಿನಿಂದ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ. ಪಕ್ಷದ ನಾಯಕಿ ಮಾಯಾವತಿ ನಿರ್ದೇಶನಂದತೆ ಪಕ್ಷ ಸಂಘಟನೆಗೆ ರಾಜ್ಯಾದ್ಯಂತ ಕೆಲಸ ಮಾಡುತ್ತಿದ್ದೇವೆ. ಮುಂಬರುವ ಎಲ್ಲ ಚುನಾವಣೆಗಳಲ್ಲೂ ಜೆಡಿಎಸ್ ಜತೆ ಮೈತ್ರಿ ಮುಂದುವರಿಯುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.

ADVERTISEMENT

ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಂಡಿದ್ದರಂದಲೇ ಅರಕಲ ಗೂಡು, ಸಕಲೇಶಪುರ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯ ಗಳಿಸಿ ದ್ದಾರೆ. ಈ ಕ್ಷೇತ್ರಗಳ ಎಲ್ಲ ಶಾಸಕರು ಬಿಎಸ್‌ಪಿ ಕಾರ್ಯಕರ್ತರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ತಿಳಿಸಿದರು.

ಕೋಮು ಸಂಘರ್ಷದಿಂದ ದೇಶವನ್ನು ರಕ್ಷಿಸಬೇಕೆಂದರೆ ಬಿಎಸ್‌ಪಿ ನಾಯಕಿ ಮಾಯಾವತಿ ಪ್ರಧಾನಿಯಾಗ ಬೇಕು ಎಂಬುದು ದೇಶದ ಜನರ ಬಯಕೆ. ಮಾಯಾವತಿ ಜನ್ಮ ದಿನದ ಅಂಗವಾಗಿ ‘ಆರ್ಥಿಕ ಸಹಯೋಗ್ ದಿವಸ್’ ಹಮ್ಮಿಕೊಂಡಿದ್ದು, ಜನಸಾಮಾನ್ಯರಿಂದ ‘ಒಂದು ಓಟು ಹಾಗೂ ಒಂದು ನೋಟು’ ಎಂಬ ಧ್ಯೇಯವಾಕ್ಯದೊಂದಿಗೆ ಕೆಲಸ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ದೇಶದ ಅಭಿವೃದ್ಧಿ ಪತನಕ್ಕಿಳಿದಿದೆ. ಆದ್ದರಿಂದ ಬಿಎಸ್‌ಪಿ ರಾಷ್ಟ್ರಾದ್ಯಂತ ತನ್ನ ನೆಲೆ ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಜಯಗಳಿಸುವ ವಿಶ್ವಾಸವಿದೆ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಅತ್ನಿ, ಉಪಾಧ್ಯಕ್ಷ ಎ.ಪಿ.ಅಹಮದ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕೀರ್ತಿ, ದೇವರಾಜ್ ತಿರುಪತಿಹಳ್ಳಿ, ಪ್ರಕಾಶ್‌ ಕೆಸಗೋಡು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.