ಹಾಸನ: ಪ್ರೀ ವೆಡ್ಡಿಂಗ್ ಫೋಟೊ ಶೂಟ್ (ಮದುವೆಗೂ ಮೊದಲು) ಗಾಗಿ ಕರೆಸಿಕೊಂಡು ಶನಿವಾರ ಇಬ್ಬರು ಕ್ಯಾಮೆರಾಮನ್ ಗಳ ಮೇಲೆ ನಾಲ್ವರು ಹಲ್ಲೆ ನಡೆಸಿ, ಕ್ಯಾಮೆರಾ, ಆಭರಣ ದೋಚಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಕ್ಯಾಮೆರಾಮನ್ಗಳಾದ ನಗರದ ಉಮೇಶ್ ಮತ್ತು ವಿಕ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ವ್ಯಕ್ತಿಯೊಬ್ಬರು ಜಸ್ಟ್ ಡಯಲ್ ಮೂಲಕ ಪದ್ಮಿನಿ ಸ್ಟುಡಿಯೊಗೆ ಕರೆ ಮಾಡಿ ಪ್ರೀ ವೆಡ್ಡಿಂಗ್ ಶೂಟ್ಗೆ ಬುಕ್ ಮಾಡಿದ್ದಾರೆ. ಅದರಂತೆ ನಾಲ್ಕು ಮಂದಿಯ ತಂಡ ಬೆಳಿಗ್ಗೆ 5 ಗಂಟೆಗೆ ಕಾರಿನಲ್ಲಿ ಸ್ಟೊಡಿಯೋ ಬಳಿ ಬಂದು, ಉಮೇಶ್ ಮತ್ತು ವಿಕ್ಕಿ ಅವರನ್ನು ಹತ್ತಿಸಿಕೊಂಡು, ಹುಡುಗ– ಹುಡುಗಿ ನೇರವಾಗಿ ಶೆಟ್ಟಿಹಳ್ಳಿ ಚರ್ಚ್ ಗೆ ಬರುತ್ತಾರೆ ಎಂದು ಹೇಳಿಕರೆದುಕೊಂಡು ಹೊರಟಿದ್ದಾರೆ.
ಹಾಸನ ತಾಲ್ಲೂಕಿನ ಶಂಕರನಹಳ್ಳಿ ಸಮೀಪ ಕಾರು ನಿಲ್ಲಿಸಿ, ಇಬ್ಬರು ಕ್ಯಾಮೆರಾಮನ್ಗಳನ್ನು ಕೆಳಗೆ ಇಳಿಸಿ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಅವರ ಬಳಿ ಇದ್ದ ಏಳು ಲಕ್ಷ ರೂಪಾಯಿ ಮೌಲ್ಯದ ಡ್ರೋಣ್, ವಿಡಿಯೊ ಕ್ಯಾಮೆರಾ, ಮೊಬೈಲ್, ಚಿನ್ನದ ಉಂಗುರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ.
‘ಕ್ಯಾಮೆರಾಮನ್ಗಳು ಆನ್ಲೈನ್ ಬುಕ್ಕಿಂಗ್ ಮಾಡಿಕೊಳ್ಳಬಾರದು. ಶೀಘ್ರ ಆರೋಪಿಗಳನ್ನು ಬಂಧಿಸಬೇಕು’ ಎಂದು ಛಾಯಾಗ್ರಾಹಕ ಸಂಘದ ಅಧ್ಯಕ್ಷ ಸ್ವಾಮಿ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.