ADVERTISEMENT

ನಾಲ್ವರು ಅಂತರ ರಾಜ್ಯ ಕಳ್ಳರ ಬಂಧನ

ಎಂಟು ಪ್ರಕರಣಗಳಲ್ಲಿ ಭಾಗಿ: ₹27 ಲಕ್ಷ ನಗದು ವಶ

​ಪ್ರಜಾವಾಣಿ ವಾರ್ತೆ
Published 20 ಮೇ 2022, 15:55 IST
Last Updated 20 ಮೇ 2022, 15:55 IST
ಪೊಲೀಸರು ಆರೋಪಿಗಳಿಂದ ನಗದನ್ನು ವಶಪಡಿಸಿಕೊಂಡಿದ್ದಾರೆ
ಪೊಲೀಸರು ಆರೋಪಿಗಳಿಂದ ನಗದನ್ನು ವಶಪಡಿಸಿಕೊಂಡಿದ್ದಾರೆ   

ಹಾಸನ: ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಅಂತರ ರಾಜ್ಯ ಮತ್ತು ಜಿಲ್ಲಾ ಕಳ್ಳರನ್ನು ಬಂಧಿಸಿರುವ ಅರಸೀಕೆರೆ ಗ್ರಾಮಾಂತರ ವೃತ್ತದ ಪೊಲೀಸರು, ₹27 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

‘ತಮಿಳುನಾಡು ಮೂಲದ ಮೂವರು ಮತ್ತು ಕೋಲಾರ ಜಿಲ್ಲೆಯ ಒಬ್ಬನನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕ್ಯಾಟರ್‌ ಬಿಲ್‌, ಕಬ್ಬಿಣದ ಸಣ್ಣ ಬಾಲ್ಸ್‌ ವಶಪಡಿಸಿಕೊಳ್ಳಲಾಗಿದೆ.ಪ್ರಕರಣದಲ್ಲಿ ಇನ್ನೂ ನಾಲ್ವರನ್ನು ಬಂಧಿಸಬೇಕಿದೆ. ಗಮನ ಬೇರೆಡೆ ಸೆಳೆದು ಇಲ್ಲವೇ ನಿರ್ಲಕ್ಷ್ಯವಹಿಸಿದವರನ್ನೇ ಗುರಿಯಾಗಿಸಿಕೊಂಡು ಹೊಂಚು ಹಾಕಿ ಹಣ ದೋಚುತ್ತಿದ್ದರು.ಜಿಲ್ಲೆಯಲ್ಲಿ ನಡೆದಿರುವ ಒಟ್ಟು 7 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ಪ್ರಕರಣ ಸೇರಿ 8 ಕೃತ್ಯಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‍ಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘2021ರ ಅ.27ರಂದು ಜಿಲ್ಲೆಯ ಸಿಎಂಎಸ್ ಇನ್ಫೋ ಸಿಸ್ಟಂ ಲಿಮಿಟೆಡ್ ವ್ಯವಸ್ಥಾಪಕ ಹರೀಶ್ ಕುಮಾರ್ ಎಂಬುವರು ನಟೇಶ್ (ಚಾಲಕ), ರುದ್ರೇಶ್, ಭರತ್ (ಕ್ಯಾಷ್ ಆಫೀಸರ್‌) ಮತ್ತು ಪಾಂಡುರಂಗ (ಗನ್‍ಮ್ಯಾನ್) ಅವರನ್ನು ಬಾಣಾವರ ಎಸ್‍ಬಿಐ ಬ್ಯಾಂಕ್ ಎಟಿಎಂ, ಅರಸೀಕೆರೆ ಕೆನರಾ ಬ್ಯಾಂಕ್ ಎಟಿಎಂ ಮತ್ತು ಜಾವಗಲ್ ಎಟಿಎಂಗಳಿಗೆ ಹಣ ತುಂಬಲು ಕಳುಹಿಸಿದ್ದರು. ಅಂದು ಬೆಳಿಗ್ಗೆ 11.15ರ ಸುಮಾರಿಗೆ ಹಾಸನ ಕೆನರಾ ಬ್ಯಾಂಕಿನಲ್ಲಿ ₹43 ಲಕ್ಷ, ಕರ್ನಾಟಕ ಬ್ಯಾಂಕಿನಲ್ಲಿ ₹91 ಲಕ್ಷ ಡ್ರಾ ಮಾಡಿಕೊಂಡು ಹರೀಶ್ ಕುಮಾರ್‌ ಅವರಿಗೆ ವರದಿ ಸಲ್ಲಿಸಿ 11.40ರಲ್ಲಿ ಹಾಸನದಿಂದ ಹೊರಟಿದ್ದರು’ ಎಂದು ಎಸ್‌ಪಿ ವಿವರಿಸಿದರು.

ADVERTISEMENT

‘ನಂತರ ಅರಸೀಕೆರೆಯ ಎಸ್‍ಬಿಐ ಬ್ಯಾಂಕ್‌ನಲ್ಲಿ ₹44 ಲಕ್ಷ ಡ್ರಾ ಮಾಡಿಕೊಂಡು ಒಟ್ಟು ₹1.78 ಕೋಟಿ ಹಣವನ್ನು ವಾಹನದಲ್ಲಿಟ್ಟುಕೊಂಡರು. ಅರಸೀಕೆರೆಯ ಬಿ.ಎಚ್ ರಸ್ತೆಯ ಕರ್ನಾಟಕ ಬ್ಯಾಂಕ್ ಎಟಿಎಂಗೆ ₹20. 50 ಲಕ್ಷ ಲೋಡ್ ಮಾಡಿ ನಂತರ ಜಾಜೂರಿನ ಕರ್ನಾಟಕ ಬ್ಯಾಂಕ್ ಎಟಿಎಂಗೆ ₹12.50 ಲಕ್ಷ ಲೋಡ್ ಮಾಡಿ, ಮಧ್ಯಾಹ್ನ 1.40 ಗಂಟೆಯಲ್ಲಿ ಬಾಣಾವರದ ಬಿ.ಎಚ್. ರಸ್ತೆಯಲ್ಲಿರುವ ಎಸ್‍ಬಿಐ ಬ್ಯಾಂಕಿನ ಎಟಿಎಂಗೆ ಹಣ ತುಂಬಲು ಪಾಂಡುರಂಗ, ರುದ್ರೇಶ್ ಮತ್ತು ಭರತ್ ತೆರಳಿದ್ದರು.ಚಾಲಕ ವಾಹನದಿಂದ ಕೆಳಗಿಳಿದು ನಿಂತಿದ್ದ. ಈ ವೇಳೆ ಬಂದ ಕಳ್ಳರು ವಾಹನದಲ್ಲಿದ್ದ ₹43 ಲಕ್ಷದ ಬ್ಯಾಗ್ ಕದ್ದು ಪರಾರಿಯಾಗಿದ್ದರು’ ಎಂದರು.

‘ಈ ಬಗ್ಗೆ ಹರೀಶ್ ಕುಮಾರ್ ನೀಡಿದ ದೂರು ಆಧರಿಸಿ ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗಳ ಪತ್ತೆಗೆ ಗ್ರಾಮಾಂತರ ಸಿಪಿಐ ವಸಂತ ಕೆ.ಎಂ ಮತ್ತು ಬಾಣಾವರ ಪಿಎಸ್‍ಐ ಅಭಿಜಿತ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಮಾಹಿತಿ ಸಂಗ್ರಹಿಸಿ ಮೇ 16ರಂದು ತಿಪಟೂರು ಎಸ್‍ಬಿಐ ಬ್ಯಾಂಕ್ ಮುಂಭಾಗ ನಿಂತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕಳವು ಪ್ರಕರಣ ಬಯಲಾಗಿದೆ’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಎನ್.ನಂದಿನಿ, ಸಿಪಿಐ ವಸಂತ ಕೆ.ಎಂ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.