ನುಗ್ಗೇಹಳ್ಳಿ: ‘ಇಲ್ಲಿಯ ಐತಿಹಾಸಿಕ ಹಿರೇಕೆರೆ 44 ವರ್ಷಗಳ ಬಳಿಕ ತುಂಬಿರುವುದಕ್ಕೆ ಸಂತಸವಾಗಿದೆ’ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಹಿರೇಕೆರೆ ಕೋಡಿಬಿದ್ದ ಹಿನ್ನೆಲೆಯಲ್ಲಿ ಸೋಮವಾರ ಭೇಟಿ ನೀಡಿದ್ದಅವರು, ‘ಈ ಭಾಗದ ಜನರ ಒತ್ತಾಯದಂತೆ ನುಗ್ಗೇಹಳ್ಳಿ ಏತನೀರಾವರಿ ಯೋಜನೆ ಮೂಲಕ ಕೆರೆಯನ್ನು ತುಂಬಿಸಲಾಗಿದ್ದು, ನಾನು ಚುನಾವಣಾ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಸುಮಾರು 44 ವರ್ಷಗಳ ನಂತರ ಕೆರೆ ತುಂಬಿದ್ದು ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಿದೆ. ಕೆರೆಭಾಗದ ಕೆಲ ರೈತರ ತೋಟ ಹಾಗೂ ಗದ್ದೆಗಳಲ್ಲಿ ನೀರು ನಿಲ್ಲುತ್ತಿದ್ದು. ನೀರುಗಾಲುವೆಗಳನ್ನು ರೈತರು ಸ್ವಚ್ಛಗೊಳಿಸಿ ನೀರು ಹೋಗುವಂತೆ ಅನುಕೂಲ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಇನ್ನೂ 15 ದಿನ ಹಿರೇಕೆರೆಗೆ ನೀರು ಬಿಡಲಾಗುತ್ತದೆ. ಈ ಕೆರೆಯ ಮೂಲಕ ಚನ್ನನಕಟ್ಟೆಗೆ ನೀರು ಹರಿಸಬೇಕಾಗುತ್ತದೆ. ನಂತರ ಜಂಬೂರು ಹಾಗೂ ತಾವರೆಕೆರೆ ಕೆರೆಗಳಿಗೆ ನೀರು ಬಿಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ತೋಟಿ ನಾಗರಾಜು, ಮಂಜುನಾಥ್, ಚಂದ್ರು, ಬಸವನಪುರ ಪ್ರಕಾಶ್, ಗ್ರಾಮಸ್ಥರಾದ ರೇಣುಕಪ್ರಸಾದ್, ಪುಟ್ಟರುದ್ರಶೆಟ್ಟಿ, ಎನ್.ವಿ. ನಾಗರಾಜು, ಹೊನ್ನೇಗೌಡ ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.