ಬೇಲೂರು: ಕಕ್ಷಿದಾರರು ವಿನಾಕಾರಣ ಅಲೆಯುವ ಪರಿಸ್ಥಿತಿಯನ್ನು ವಕೀಲರು ನಿರ್ಮಿಸಬಾರದು ಎಂದು ಹೈಕೋರ್ಟ್ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಹೇಳಿದರು.
ಪಟ್ಟಣ ಸಮೀಪದ ಜೆಎಂಎಫ್ಸಿ ನ್ಯಾಯಾಲಯದ ಅವರಣದಲ್ಲಿ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ನ್ಯಾಯಾಲಯದಲ್ಲಿ ಆರು ಸಾವಿರಕ್ಕೂ ಅಧಿಕ ಪ್ರಕರಣಗಳಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ನ್ಯಾಯಾಲಯ ನೀಡಲಾಗಿದೆ. ಶಾಸಕರ ಸಹಕಾರ ಪಡೆದು ಶೀಘ್ರವೇ ವಕೀಲರ ಭವನ, ಗ್ರಂಥಾಲಯ, ಸಭಾಂಗಣ, ವಸತಿಗೃಹಕ್ಕೆ ಪ್ರಸ್ತಾವ ಕಳುಹಿಸಿ ಎಂದ ಅವರು ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಯಾಗಾರ ಏರ್ಪಡಿಸುವುದರಿಂದ ಯುವ ವಕೀಲರಿಗೆ ಹೆಚ್ಚಿನ ಕಾನೂನಿನ ಅರಿವು ತಿಳಿಯುತ್ತದೆ’ ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಮಾತನಾಡಿ, ‘ನ್ಯಾಯಾಧೀಶರು, ವಕೀಲರು ಮತ್ತು ಸಿಬ್ಬಂದಿ ಮೊದಲು ಕಕ್ಷಿದಾರರನ್ನು ಅನ್ನದಾತರು ಎಂದು ಗೌರವಿಸಿದರೆ ಮಾತ್ರ ನ್ಯಾಯಾಂಗ ಇಲಾಖೆಯ ಘನತೆ ಉಳಿಯುತ್ತದೆ. ಆದಷ್ಟು ಕಡಿಮೆ ಶುಲ್ಕದಲ್ಲಿ ಅವರಿಗೆ ಎಲ್ಲಾ ರೀತಿಯ ಸಹಾಯ ಮಾಡಿದಾಗ ಮಾತ್ರ ಅವರ ಬೆವರಿಗೆ ಬೆಲೆ ಬರುತ್ತದೆ’ ಎಂದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ‘ಈ ನ್ಯಾಯಾಲಯಕ್ಕೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ನೀಡಲು ನಾನು ಸದಾ ಬದ್ಧ’ ಎಂದು ಭರವಸೆ ನೀಡಿದರು.
ಜಿಲ್ಲಾ ನ್ಯಾಯಾಧೀಶರಾದ ಹೇಮಾವತಿ, ತಾಲ್ಲೂಕು ಹಿರಿಯ ಶ್ರೇಣಿ ನ್ಯಾಯಾಧೀಶೆ ಶಶಿಕಲಾ, ಕಿರಿಯ ಶ್ರೇಣಿ ನ್ಯಾಯಾಧೀಶ ನಾಗೇಂದ್ರ, ನೂತನ ನ್ಯಾಯಾಧೀಶೆ ಸಲ್ಮಾ, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಕೆ.ಎನ್. ನಳಿನಿ, ಕಾರ್ಯನಿರ್ವಾಹಕ ಎಂಜಿನಿಯರ್ ಗಿರೀಶ್, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಂ.ಪೃಥ್ವಿ, ಕಾರ್ಯದರ್ಶಿ ಪುಟ್ಟಸ್ವಾಮೀಗೌಡ ಭಾಗವಹಿಸಿದ್ದರು.
6,ಸಾವಿರಕ್ಕೂ ಅಧಿಕ ಪ್ರಕರಣಗಳು ಇರುವ ನ್ಯಾಯಾಲಯ ನ್ಯಾಯಾಲಯಕ್ಕೆ ಅಗತ್ಯ ಸೌಲಭ್ಯ:ಶಾಸಕ ಭರವಸೆ ಕಕ್ಷಿದಾರರು ಅನ್ನದಾತರು ಎಂದು ಗೌರವಿಸಿ
ಮಲೆನಾಡು ಭಾಗದ ವಕೀಲರು ‘ಬೆಳಿಗ್ಗೆ ಲಾಯರ್ ಮಧ್ಯಾಹ್ನ ತೋಟ’ ಎನ್ನುವ ಬದಲು ಸಂಪೂರ್ಣ ನ್ಯಾಯಾಂಗದಲ್ಲಿ ತೊಡಗಿಸಿಕೊಂಡು ನ್ಯಾಯ ನೀಡಿ
-ಎಚ್.ಪಿ.ಸಂದೇಶ್ ಹೈಕೋರ್ಟ್ ನ್ಯಾಯಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.