ಹಾಸನ: ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿ ಪತ್ತೆ ಹಚ್ಚುವುದು, ತೆರವುಗೊಳಿಸುವುದು, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಕೆರೆ ಒತ್ತುವರಿ ತೆರವು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನಗರದ ಹುಣಸಿನಕೆರೆ ದಡದಲ್ಲಿ ಸಾರ್ವಜನಿಕರು ಕಸ ವಿಲೇವಾರಿ ಮಾಡುತ್ತಿದ್ದಾರೆ. ಈ ಕೆರೆ ಸುತ್ತ ಬೇಲಿ ನಿರ್ಮಾಣ ಮಾಡಿ, ಸಂರಕ್ಷಣೆ ಮಾಡಬೇಕು. ಜೊತೆಗೆ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು’ ಎಂದು ಬೃಹತ್ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
‘ಕೆರೆಯ ಬಳಿಯಿರುವ ಮನೆಗಳ ಒಳಚರಂಡಿ ನೀರು ಕೆರೆಗೆ ಹರಿಯುವಂತೆ ಸಂಪರ್ಕ ನೀಡಿದ್ದಾರೆ ಇದನ್ನು ಮೊದಲು ತಪ್ಪಿಸಬೇಕು. ಉಪ ಲೋಕಾಯುಕ್ತರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನೀಡಿರುವ ನಿರ್ದೇಶನದಂತೆ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಕೂಡಲೇ ಲೋಕಾಯುಕ್ತ ಕಚೇರಿಗೆ ವರದಿ ಕಳುಹಿಸುವಂತೆ’ ಸೂಚಿಸಿದರು.
‘ಪ್ರತಿ ತಾಲ್ಲೂಕಿನಲ್ಲಿ ಕೆರೆ ಒತ್ತುವರಿ ಬಗ್ಗೆ ಸಭೆ ನಡೆಸಿ, ಒತ್ತುವರಿ ಗುರುತಿಸಿ ತೆರವುಗೊಳಿಸಿರುವ ಸಂಖ್ಯೆ, ತೆರವಿಗೆ ಬಾಕಿಯಿರುವ ಸಂಖ್ಯೆ ಮತ್ತು ತೆರವಿಗೆ ಏನು ಸಮಸ್ಯೆ ಇದೆ ಎಂಬುದರ ಬಗ್ಗೆ ವರದಿ ನೀಡಬೇಕು’ ಎಂದು ಸೂಚಿಸಿದರು.
ಜಿಲ್ಲೆಯಲ್ಲಿರುವ ಕೆರೆಗಳು ಪೂರ್ಣ ಪ್ರಮಾಣದಲ್ಲಿ, ಶೇ 50 ರಷ್ಟು, ಶೇ 50 ಕ್ಕಿಂತ ಕಡಿಮೆ ನೀರು ತುಂಬಿರುವ ಹಾಗೂ ನೀರೇ ಇಲ್ಲದಿರುವ ಕೆರೆಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.
‘ಕೆರೆಗಳ ನೀರಿನ ಮಾದರಿಗಳನ್ನು ಪರೀಕ್ಷೆ ನಡೆಸಬೇಕು. ಬಳಕೆಗೆ ಯೋಗ್ಯವಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಬೇಕು. ಕಲುಷಿತಗೊಂಡಿರುವ ಬಗ್ಗೆ ಅನುಮಾನಗಳು ಬಂದರೆ ಪರಿಸರ ಇಲಾಖೆ ಗಮನಕ್ಕೆ ತಂದು ನೀರಿನ ಮಾದರಿಗಳನ್ನು ಪರೀಕ್ಷೆ ನಡೆಸುವಂತೆ’ ನಿರ್ದೇಶನ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಕೆ.ದಾಕ್ಷಾಯಿಣಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ, ಯೋಜನಾ ನಿರ್ದೇಶಕ ನಾಗರಾಜ್, ಅಧಿಕಾರಿಗಳು ಭಾಗವಹಿಸಿದ್ದರು.
ಕೆರೆಗಳ ಹೂಳು ತೆಗೆಯಬೇಕು. ಕೆರೆಗೆ ನೀರು ಸರಾಗವಾಗಿ ಹರಿಯಲು ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಕೆರೆಗಳ ಮೇಲ್ವಿಚಾರಣೆ ಮಾಡಬೇಕು
–ಕೆ.ಎಸ್. ಲತಾಕುಮಾರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.