ADVERTISEMENT

ಹೊಳೆನರಸೀಪುರ | ‘ದ್ರವರೂಪದ ಯೂರಿಯಾ ಬಳಕೆಗೆ ಮುಂದಾಗಿ’

ಅಗತ್ಯಕ್ಕಿಂತ ಹೆಚ್ಚು ರಾಸಾಯನಿಕ ಗೊಬ್ಬರ ಬೇಡ: ತಹಶೀಲ್ದಾರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 5:41 IST
Last Updated 1 ಆಗಸ್ಟ್ 2025, 5:41 IST
ಹೊಳೆನರಸೀಪುರ ತಾಲ್ಲೂಕಿನ ಕಟ್ಟೆಬೆಳಗುಲಿಯ ರೈತ ಕುಮಾರ್ ಜಮೀನಿನಲ್ಲಿ ಬುಧವಾರ ದ್ರವ ರೂಪದ ಯೂರಿಯಾವನ್ನು ಡ್ರೋನ್ ಮೂಲಕ ಸಿಂಪಡಿಸುವ ಪ್ರಾಯೋಗಿಕ ಕಾರ್ಯಕ್ರಮಕ್ಕೆ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಚಾಲನೆ ನೀಡಿದರು. ಕೃಷಿ ಅಧಿಕಾರಿ ಸವಿತಾ, ಕೃಷಿ ಇಲಾಖೆಯ ನಾಗೇಶ್ ರಾವ್, ಹೇಮಾ, ಧನು, ಕುಮಾರಸ್ವಾಮಿ, ಹರೀಶ್ ಭಾಗವಹಿಸಿದ್ದರು
ಹೊಳೆನರಸೀಪುರ ತಾಲ್ಲೂಕಿನ ಕಟ್ಟೆಬೆಳಗುಲಿಯ ರೈತ ಕುಮಾರ್ ಜಮೀನಿನಲ್ಲಿ ಬುಧವಾರ ದ್ರವ ರೂಪದ ಯೂರಿಯಾವನ್ನು ಡ್ರೋನ್ ಮೂಲಕ ಸಿಂಪಡಿಸುವ ಪ್ರಾಯೋಗಿಕ ಕಾರ್ಯಕ್ರಮಕ್ಕೆ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಚಾಲನೆ ನೀಡಿದರು. ಕೃಷಿ ಅಧಿಕಾರಿ ಸವಿತಾ, ಕೃಷಿ ಇಲಾಖೆಯ ನಾಗೇಶ್ ರಾವ್, ಹೇಮಾ, ಧನು, ಕುಮಾರಸ್ವಾಮಿ, ಹರೀಶ್ ಭಾಗವಹಿಸಿದ್ದರು   

ಹೊಳೆನರಸೀಪುರ: ‘ಕೆಲವು ವರ್ಷಗಳಿಂದ ರೈತರು ಹೆಚ್ಚು ಇಳುವರಿ ಪಡೆಯಲು ಅಗತ್ಯಕ್ಕಿಂತ ಹೆಚ್ಚು ರಾಸಾಯನಿಕ ಗೊಬ್ಬರಗಳು ಹಾಗೂ ಕ್ರಿಮಿನಾಶಕ ಬಳಸಿ ಭೂಮಿಯನ್ನು ಬರಡಾಗಿಸಿದ್ದಾರೆ. ಇದರಿಂದಾಗಿ ಮುಂದೆ ಏನೂ ಬೆಳೆಯಲಾರದ ಸ್ಥಿತಿ ಬಂದರೂ ಬರಬಹುದು’ ಎಂದು ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಟ್ಟೆಬೆಳಗುಳಿಯ ಕುಮಾರ್ ಅವರ ಗದ್ದೆಗೆ ನ್ಯಾನೊ ತಂತ್ರಜ್ಞಾನದ ಡ್ರೋನ್ ಮೂಲಕ ಗೊಬ್ಬರ ಸಿಂಪಡಿಸುವ ವಿಧಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ನ್ಯಾನೊ ತಂತ್ರಜ್ಞಾನದಲ್ಲಿ ಶೇ 50ರಷ್ಟು ಕಡಿಮೆ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಬಳಸಬಹುದು, ಇದರಿಂದ  ಭೂಮಿಯ ಫಲವತ್ತತೆ ಉಳಿಯುತ್ತದೆ. ಒಂದು ಎಕರೆಗೆ 10 ನಿಮಿಷದಲ್ಲಿ ಗೊಬ್ಬರ ಸಿಂಪಡಿಸಲಯ ಸಾಧ್ಯವಾಗುತ್ತದೆ, ಹಣ ಮತ್ತು ಸಮಯ ಉಳಿಯುತ್ತದೆ’ ಎಂದು ಸಲಹೆ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸವಿತಾ ಮಾತನಾಡಿ, ‘ಬೇಸಾಯಕ್ಕೆ ಹರಳು ರೂಪದ ಯೂರಿಯಾವನ್ನು ಹೆಚ್ಚು ಬಳಸುವುದರಿಂದ ಮಣ್ಣಿನ ಫಲವತ್ತತೆ ಹಾಳಾಗಿ ಇಳುವರಿಯೂ ಕಡಿಮೆ ಆಗುತ್ತದೆ. ದ್ರವರೂಪದ ಯೂರಿಯಾವನ್ನು ನ್ಯಾನೊ ಯೂರಿಯಾ ಎನ್ನುತ್ತಾರೆ, ಇದು ಕಡಿಮೆ ಪ್ರಮಾಣದಲ್ಲಿ ಹೆಚ್ಚು ಪರಿಣಾಮಕಾರಿ, ಅಗತ್ಯ ಸಮಯದಲ್ಲಿ ಸೂಕ್ತ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಬಳಸಬೇಕು. ಸಾವಯವ ದ್ರವ್ಯಗಳು ಮತ್ತು ಜೈವಿಕ ಗೊಬ್ಬರಗಳಂತಹ ಪರ್ಯಾಯಗಳಿಂದ ಸಿಗುವ ಸಾರಜನಕವು ಮಣ್ಣಿನ ಆರೋಗ್ಯ ಸುಧಾರಿಸಲು ಸಹಕಾರಿ’ ಎಂದರು.

ADVERTISEMENT

‘ಹಸಿರೆಲೆ ಗೊಬ್ಬರಗಳನ್ನು ಮಣ್ಣಿನಲ್ಲಿ ಬೆರೆಸಿ, ದ್ವಿದಳ ಧಾನ್ಯ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯಬಹುದು. ಇಲಾಖೆಯ ಸಲಹೆ ಹಾಗೂ ಮಾರ್ಗದರ್ಶನವನ್ನು ಪಾಲಿಸುವುದರಿಂದ ಉತ್ತಮ ಇಳುವರಿ ಪಡೆದು ಭೂಮಿಯ ಫಲವತ್ತತೆಯನ್ನು ಸದಾಕಾಲ ಕಾಪಾಡಿಕೊಳ್ಳಬಹುದು’ ಎಂದರು.

ಹಾಸನ ತೋಟಗಾರಿಕೆ ಇಲಾಖೆ ಅಧಿಕಾರಿ ನಾಗೇಶ್ ರಾವ್, ಕೃಷಿ ಇಲಾಖೆಯ ಹೇಮಾ, ಧನು, ಬೋರೇಗೌಡ, ರೈತರಾದ ಕಟ್ಟೆಬೆಳಗುಳಿಯ ಕುಮಾರಸ್ವಾಮಿ, ಹರೀಶ್, ತೆರಣ್ಯದ ಧರ್ಮರಾಜ್, ಚಿಕ್ಕನಹಳ್ಳಿಯ ಸತೀಶ್, ಸುತ್ತಮುತ್ತಲಿನ ಗ್ರಾಮಗಳ ರೈತರು ಭಾಗವಹಿಸಿ ನ್ಯಾನೊ ತಂತ್ರಜ್ಞಾದ ಮಾಹಿತಿ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.