ADVERTISEMENT

ಅಗ್ನಿಪಥ: ಕಾಯಂ ಸೇವೆಗೂ ಅವಕಾಶ

ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಕೇಂದ್ರ ಸಚಿವ ಕೃಷ್ಣಪಾಲ್‌ ಗುರ್ಜರ್‌

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 5:00 IST
Last Updated 7 ಜುಲೈ 2022, 5:00 IST
ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬರು ಪ್ರಶ್ನೆ ಕೇಳಿದರು
ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬರು ಪ್ರಶ್ನೆ ಕೇಳಿದರು   

ಹಾಸನ: ಅಗ್ನಿಪಥ 4 ವರ್ಷದ ಪ್ರಾರಂಭಿಕ ತರಬೇತಿ ಯೋಜನೆಯಾಗಿದೆ. ಮೊದಲ 4 ವರ್ಷ ತರಬೇತಿ ‌ಸ್ವರೂಪದಲ್ಲಿ ಇರಲಿದೆ. ನಂತರ ಒಂದಿಷ್ಟು ಮಂದಿ ಕಾಯಂ‌ಸೇವೆಯಲ್ಲೂ ಮಂದುವರಿಯಬಹುದು‌ ಎಂದು ಕೇಂದ್ರ ಸಚಿವ ಕೃಷ್ಣಪಾಲ್‌ ಗುರ್ಜರ್ ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಜಗತ್ತಿನೊಂದಿಗೆ ಸ್ಪರ್ಧೆ ಮಾಡಬೇಕು. ಪರಿವರ್ತನೆ ಆಗದಿದ್ದರೆ ದೇಶ ಪ್ರಗತಿ ಕಾಣಲ್ಲ. ಜಿಎಸ್‌ಟಿ ಬಗ್ಗೆಯೂ ಮೊದಲು‌ ವಿರೋಧ ಇತ್ತು ಈಗ ವಿರೋಧಿಗಳು ಬಾಯಿ ಮುಚ್ಚಿದ್ದಾರೆ ಅದೇ ರೀತಿ ಅಗ್ನಿಪಥ್ ಯೋಜನೆಯ ಬಗ್ಗೆ ಮುಂದೆ ತಿಳಿಯಲಿದೆ ಎಂದರು.

ಜಿಲ್ಲಾಧಿಕಾರಿ‌ ಆರ್. ಗಿರೀಶ್ ಮಾತನಾಡಿ, ಉದ್ಯೋಗ ಸೃಷ್ಟಿಸುವ ಬಗ್ಗೆ ಚಿಂತನೆ ಹಾಗೂ ಪ್ರಯತ್ನ ಮಾಡಬೇಕು. ಹೊಸ ಸ್ಟಾರ್ಟ್ ಅಪ್ ಕಂಪನಿಗಳು ಪ್ರಾರಂಭವಾಗಿವೆ. ಯುವಕರು ಸ್ವಉದ್ಯೋಗ ಹಾಗೂ ಕೈಗಾರಿಕೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು. ಎಲ್ಲರೂ ಪರಿಶ್ರಮ ವಹಿಸಿ, ಉತ್ತಮ‌ ಸಾಧನೆ ಮಾಡಿ ಎಂದು ಸಲಹೆ ನೀಡಿದರು.

ADVERTISEMENT

ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ಯುವ ಸಂವೇದನೆ ಸಚಿವರಿಗೆ ಅರ್ಥವಾಗಿದೆ. ಜನಪ್ರತಿನಿಧಿಗಳು ವಿದ್ಯಾರ್ಥಿಗಳ ಭಾವನೆಗೆ ಸ್ಪಂದಿಸುವ ಕೆಲಸ ಆಗಲಿದೆ. ನಿಮ್ಮ ಯೋಚನೆಯನ್ನು ಯೋಜನೆಯನ್ನಾಗಿ ರೂಪಿಸುವ ಜನಪ್ರತಿನಿಧಿಗಳು ಬರಬೇಕು. ಯುವ ಮತದಾರರು‌ ಸರಿಯಾದ ನಾಯಕರನ್ನು ಆಯ್ಕೆ ‌ಮಾಡಬೇಕು. ಜಿಲ್ಲೆಯಲ್ಲಿ ಶೇ 100 ರಷ್ಟು‌ ಮತದಾನ ಆಗಬೇಕು‌ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಸಂಘದ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪುನೀತ್, ಉಪ ವಿಭಾಗಾಧಿಕಾರಿ ಜಗದೀಶ್, ನಗರಸಭೆ ಆಯುಕ್ತ ಪರಮೇಶ್ವಪ್ಪ ಹಾಜರಿದ್ದರು.

ಆರ್ಥಿಕವಾಗಿ ಹಿಂದುಳಿದವರಿಗೂ ಮೀಸಲಾತಿ

ಶಿಕ್ಷಣದಲ್ಲಿ ಮಿಸಲಾತಿ‌ ವ್ಯವಸ್ಥೆಯಿಂದ ಪ್ರತಿಭಾವಂತರು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಮುಂದುವರಿದ ಸಮುದಾಯದ ಅತೀ ಬಡ ಮಕ್ಕಳಿಗೂ ಮೀಸಲಾತಿ ಅವಕಾಶ ಸಿಗಬೇಕು ಎಂದು ವಿದ್ಯಾರ್ಥಿನಿ ಗಾನವಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಆರ್ಥಿಕವಾಗಿ ಹಿಂದುಳಿದ, ಬಡತನ‌ ರೇಖೆಗಿಂತ ಕೆಳಗಿರುವ ಮಕ್ಕಳಿಗೆ ಅವಕಾಶ ಒದಗಿಸಲು ಶೇ 10 ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಮಸೂದೆ ಅಂಗೀಕರಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಯೊಂದಿಗೆ ಎಲ್ಲರಿಗೂ ಸಮಾನವಾದ ಅವಕಾಶ ಸಿಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು’ ಎಂದು ಭರವಸೆ ನೀಡಿದರು.

ರಾಜಕೀಯ ನಾಯಕರು ಹಾಗೂ ಯುವಕರ ನಡುವೆ ಅಂತರವಿದ್ದು‌, ಇದನ್ನು ಸರಿದೂಗಿಸುವ ಕೆಲಸ ಮಾಡಬೇಕು. ಜೈವಿಕ ಕೃಷಿಗೆ ಹೆಚ್ಚು ಒತ್ತು ನೀಡಬೇಕು’ ಎಂದು‌ ವಿದ್ಯಾರ್ಥಿ ಇಂದ್ರಜಿತ್ ಮನವಿ‌ ಮಾಡಿದರು.

ಉತ್ತರಿಸಿದ ಸಚಿವರು, ನೈಸರ್ಗಿಕ ಕೃಷಿ ಉತ್ತೇಜನಕ್ಕೂ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಹೆಚ್ಚಿನ ಮಾರುಕಟ್ಟೆ ಒದಗಿಸಲು ಶ್ರಮಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.