ADVERTISEMENT

ಕಾಡಾನೆ ದಾಳಿ ತಡೆಗೆ ಶಾಶ್ವತ ಪರಿಹಾರ: ಭರವಸೆ

ಬೆಳೆ ನಾಶ ಪ್ರದೇಶಗಳಿಗೆ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಭೇಟಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 10:22 IST
Last Updated 19 ನವೆಂಬರ್ 2019, 10:22 IST
ಆಲೂರು ತಾಲ್ಲೂಕಿನಲ್ಲಿ ಕಾಡಾನೆ ದಾಳಿಯಿಂದ ಬೆಳೆಹಾನಿಯಾದ ಪ್ರದೇಶಗಳಿಗೆ ಶಾಸಕ ಹೆಚ್.ಕೆ ಕುಮಾರಸ್ವಾಮಿ ಭೇಟಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆಲೂರು ತಾಲ್ಲೂಕಿನಲ್ಲಿ ಕಾಡಾನೆ ದಾಳಿಯಿಂದ ಬೆಳೆಹಾನಿಯಾದ ಪ್ರದೇಶಗಳಿಗೆ ಶಾಸಕ ಹೆಚ್.ಕೆ ಕುಮಾರಸ್ವಾಮಿ ಭೇಟಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.   

ಆಲೂರು: ‘ತಾಲ್ಲೂಕಿನಲ್ಲಿ ಕಾಡಾನೆ ದಾಳಿಯಿಂದ ಹಾನಿಯಾದ ಪ್ರದೇಶಗಳಿಗೆ ಎಚ್.ಕೆ.ಕುಮಾರಸ್ವಾಮಿ ಭೇಟಿ ಮಾಡಿ ರೈತರೊಂದಿಗೆ ಸಮಾಲೋಚನೆ ನಡೆಸಿದ ನಂತರ ಕಾಡಾನೆ ದಾಳಿಗೆ ಶಾಶ್ವತ ಪರಿಹಾರವನ್ನು ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

‘ತಾಲ್ಲೂಕಿನ ಅಮಲೇಪುರ, ಕಲ್ಲಾರೆ, ಹಂಜಳಿಗೆ, ಮಾದಿಹಳ್ಳಿ ಭಾಗಕ್ಕೆ ಭೇಟಿ ನೀಡಿ ಕಾಡಾನೆ ದಾಳಿಗೆ ಬಲಿಯಾದ ಕಾಫಿ ತೋಟ, ಭತ್ತದ ಗದ್ದೆ ಹಾಗೂ ಜೋಳದ ಹೊಲಗಳನ್ನು ಪರಿಶೀಲಿಸಿ ಶೀಘ್ರದಲ್ಲಿಯೇ ರೈತರಿಗೆ ಪರಿಹಾರ ಒದಗಿಸಲಾಗುವುದು. 2017-18ನೇ ಹಾಗೂ 2018-19ನೇ ಸಾಲಿನಲ್ಲಿ ಬೆಳೆಹಾನಿ ಪರಿಹಾರ ₹ 30 ಲಕ್ಷ ಹಾಗೂ ಈ ವರ್ಷದ ಬೆಳೆಹಾನಿ ಪರಿಹಾರವನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದು ತಿಳಿಸಿದರು.

ಡಿ.ಎಫ್.ಓ ಸಿವರಾಮ್ ಬಾಬು ಮಾತನಾಡಿ, ‘ತಾಲ್ಲೂಕಿನ ಸುತ್ತಮುತ್ತ ಓಡಾಡುವ ಕಾಡಾನೆಗಳ ಪೈಕಿ 3 ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗಿದ್ದು, ಆನೆಗಳು ಯಾವ ಭಾಗದಲ್ಲಿವೇ ಎಂಬ ಮಾಹಿತಿಯನ್ನು ಅಧಿಕಾರಿಗಳಿಗೆ ಹಾಗೂ ಅಲ್ಲಿನ ಭಾಗದ ಜನರಿಗೆ ಮೆಸೇಜ್ ಹಾಗೂ ವಾಯ್ಸ್ ಮೆಸೇಜ್ ಕಳುಹಿಸಲಾಗುತ್ತಿದೆ. ಆನೆಗಳಿರುವ ಭಾಗಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹೋಗಿ ಆನೆಯನ್ನು ಓಡಿಸುವ ಮೂಲಕ ಜನರ ರಕ್ಷಣೆ ಮಾಡುತ್ತಿದ್ದಾರೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ನಂತರ ರೈತರಿಗೆ ಪರಿಹಾರವನ್ನು ಒದಗಿಸಲಾಗುವುದು’ ಎಂದರು.

ADVERTISEMENT

‘ಕಾಡಾನೆ ದಾಳಿಯಿಂದ ಹಾಳಾದ ಒಂದು ಕಾಫಿ ಗಿಡಕ್ಕೆ ₹ 200, ಒಂದು ಕ್ವಿಂಟಲ್ ಭತ್ತದ ಹಾನಿಗೆ ₹ 1,320 ಹಾಗೂ ಜೋಳ ಕ್ವಿಂಟಲ್‌ಗೆ ₹ 1,260 ಕೃಷಿ ಇಲಾಖೆಯ ನಿರ್ದೇಶನದಂತೆ ಪರಿಹಾರವನ್ನು ನೀಡಲಾಗುವುದು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ವಲಯ ಅರಣ್ಯಾಧಿಕಾರಿ ರಾಜಪ್ಪ, ಉಪವಲಯ ಅರಣ್ಯಾಧಿಕಾರಿ ಪ್ರದೀಪ್, ಅರಣ್ಯ ರಕ್ಷಕರಾದ ಪುಟ್ಟೇಗೌಡ, ಜಯಪಾಲ್, ಜೆ.ಡಿ.ಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್ ಮಂಜೇಗೌಡ, ಮುಖಂಡರಾದ ಕಾಂತರಾಜು, ಸಂತೋಷ್ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.