ADVERTISEMENT

₹ 15 ಲಕ್ಷ ಮೌಲ್ಯದ 70 ಕೆ.ಜಿ.ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 16:46 IST
Last Updated 9 ಸೆಪ್ಟೆಂಬರ್ 2020, 16:46 IST

ಅರಕಲಗೂಡು: ತಾಲ್ಲೂಕಿನ ಕೊಣನೂರು ಹೋಬಳಿ ಹೊಡೇನೂರು ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ₹ 15 ಲಕ್ಷ ಮೌಲ್ಯದ 70 ಕೆ.ಜಿ ಗಾಂಜಾವನ್ನು ಅಬಕಾರಿ ಸಿಬ್ಬಂದಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ.

ಗ್ರಾಮದ ಸೋಮೇಶ್ ಬಿನ್ ನಾಗೇಗೌಡ ಎಂಬುವವರ ಜಮೀನಿನಲ್ಲಿ ಶುಂಠಿ ಮತ್ತು ಕೆಸುವಿನ ಬೆಳೆ ನಡುವೆ ಬೆಳೆದಿದ್ದ 60 ಕೆ.ಜಿ ಗಾಂಜಾ, ಪ್ರಕಾಶ್ ಬಿನ್‌ ನಾಗರಾಜೇಗೌಡ ಜಮೀನಿನಲ್ಲಿ ಜೋಳದ ಬೆಳೆ ನಡುವೆ ಬೆಳೆದಿದ್ದ 10 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಜಮೀನಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾ ಬೆಳೆದಿದ್ದು, ಕಟಾವು ಮಾಡಿ ರವಾನೆ ಮಾಡಿರುವ ಮಾಹಿತಿ ದೊರೆತಿದೆ. ಗ್ರಾಮದ ದೇವರಾಜ ಎಂಬುವವರು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಅವರ ಮನೆಮೇಲೆ ದಾಳಿ ನಡೆಸಿದಾಗ 550 ಗ್ರಾಂ ಒಣಗಿದ ಗಾಂಜಾ ದೊರೆತಿದೆ ಎಂದು ಅಬಕಾರಿ ಇಲಾಖೆ ಜಿಲ್ಲಾ ಉಪ ಆಯುಕ್ತ ಗೋಪಾಲ ಕೃಷ್ಣೇಗೌಡ ತಿಳಿಸಿದರು.

ಗಾಂಜಾ ಬೆಳೆದು ಕೇರಳ ಮತ್ತು ಮೈಸೂರಿಗೆ ರವಾನೆ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಬುಧವಾರ ಗ್ರಾಮಕ್ಕೆ ತೆರಳಿ ಸುಮಾರು 15 ಎಕರೆಗೂ ಹೆಚ್ಚಿನ ಜಮೀನಿನಲ್ಲಿ ಹುಡುಕಾಟ ನಡೆಸಿದ್ದಾಗಿ ಹೇಳಿದರು. ಕೇರಳದಿಂದ ಶುಂಠಿ ಬೆಳೆಯಲು ಬರುವವರ ಮೂಲಕ ಈ ದಂಧೆ ನಡೆಯುತ್ತಿರುವ ಕುರಿತು ಮಾಹಿತಿ ಇದೆ. ದಾಳಿ ಮುಂದುವರಿಯಲಿದೆ ಎಂದರು.

ADVERTISEMENT

ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಸಕಲೇಶಪುರ ಅಬಕಾರಿ ಉಪ ಉಪ ಆಯುಕ್ತ ರಘು, ಜಿಲ್ಲಾ ತನಿಖಾದಳದ ಅಧಿಕಾರಿ ಕಮಲಾಕರ್, ಅಬಕಾರಿ ಉಪ ನೀರೀಕ್ಷಕಿ ಪದ್ಮ ಮತ್ತು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.