ಹಾಸನ: ಬಿಜೆಪಿ ಸೇರಿರುವ ಎ.ಮಂಜು ಉಂಡು ಹೋದ ಕೊಂಡು ಹೋದವ್ಯಕ್ತಿ.ಪಕ್ಷಕ್ಕೆ ವಿಶ್ವಾಸದ್ರೋಹ ಎಸಗಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಆರೋಪಿಸಿದರು.
ನಗರದ ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಎ.ಮಂಜು ಕಾಂಗ್ರೆಸ್ ಪಕ್ಷದಲ್ಲಿ ಹಲವು ದಶಕ ಇದ್ದು ಶಾಸಕರಾಗಿ, ಸಚಿವರಾಗಿ ಅಧಿಕಾರವನ್ನು ಅನುಭವಿಸಿ ಇಂದು ಪಕ್ಷದ ಸಿದ್ದಾಂತ ಮರೆತು ಕೋಮುವಾದಿ ಪಕ್ಷವಾದ ಬಿಜೆಪಿ ಪಕ್ಷ ಸೇರಿದ್ದಾರೆ. ಇದು ಉತ್ತಮ ರಾಜಕೀಯ ಬೆಳವಣಿಗೆಯಲ್ಲ ಎಂದರು.
ಹಾಸನದಲ್ಲಿ ಹಲವು ಬಾರಿ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಅವರನ್ನು ತಮ್ಮ ಗುರುಗಳು ಅವರ ಅಣತಿಯಂತೆ ನಡೆಯುವೆ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳುತ್ತಿದ್ದ ಮಂಜು, ಇಂದು ಗುರುವಿಗೆ ತಿರುಮಂತ್ರ ಹಾಕಿದ್ದಾರೆ. ದೇವೇಗೌಡರ ನೆಪವೂಡ್ಡಿ ಬಿಜೆಪಿ ಪಕ್ಷ ಸೇರಿರುವ ಮಂಜು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದು ತಪ್ಪು.ಅವರ ಮಗ ಜಿಲ್ಲಾ ಪಂಚಾಯತ ಸದಸ್ಯ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಆಗಿದ್ದಾರೆ. ಹೀಗಿರುವಾಗ ಗೌಡರ ಕುಟುಂಬ ರಾಜಕಾರಣ ಟೀಕಿಸಲು ಅವರಿಗೆ ಹಕ್ಕಿಲ್ಲ ಎಂದು ನುಡಿದರು.
ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿದ್ದು ಜಿಲ್ಲೆಯಲ್ಲಿ ಲೋಕ ಚುನಾವಣೆಗೆ ಜೆಡಿಎಸ್ ಬೆಂಬಲಿಸಿ ಮೈತ್ರಿ ಧರ್ಮ ಪಾಲಿಸುವುದಾಗಿ ಹೇಳಿದ ಶಿವರಾಂ , ನಾಳೆ ಸಿದ್ದಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ಇದೆ. ಅಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹಾಗೂ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರ ಸಭೆ ಸೇರಿ ತೀರ್ಮಾನ ಮಾಡಲಾಗುವುದು ಎಂದರು.
ಸಚಿವ ರೇವಣ್ಣ ಮತ್ತು ಪ್ರಜ್ವಲ್ ಭೇಟಿ
ನಗರದ ಬಿ.ಶಿವರಾಂ ಮನೆಗೆ ಭೇಟಿ ನೀಡಿದ ಸಚಿವ ರೇವಣ್ಣ ಹಾಗೂ ಪ್ರಜ್ವಲ್ ಲೋಕಸಭಾ ಚುನಾವಣೆಗೆ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿ ಆಶೀರ್ವದಿಸುವಂತೆ ಬಿ.ಶಿವರಾಂ ಅವರಲ್ಲಿ ಮನವಿ ಮಾಡಿದರು. ಈ ವೇಳೆ ಪ್ರಜ್ವಲ್ ಮಾತನಾಡಿ ಜಿಲ್ಲೆಯ ಹಿರಿಯ ರಾಜಕಾರಣಿಯಾದ ಶಿವರಾಂ ಅವರನ್ನು ಅವರ ಮನೆಯಲ್ಲೆ ಭೇಟಿ ಮಾಡಿದ್ದು, ಸಹಕಾರ ನೀಡುವ ಮೂಲಕ ರಾಜಕೀಯ ಶಕ್ತಿ ತುಂಬುವಂತೆ ಮನವಿ ಮಾಡಿರುವುದಾಗಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.