ADVERTISEMENT

ಸರ್ಕಾರಿ ಶಾಲೆಯತ್ತ ಅಭಿವೃದ್ಧಿ ನಡೆ

ಹಂಜಳಿಗೆ ಕಾಳಪ್ಪ ಅಸೋಸಿಯೇಶನ್‌ನಿಂದ ಸರ್ಕಾರಿ ಶಾಲೆಗಳ ಬಲವರ್ಧನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 2:48 IST
Last Updated 6 ಆಗಸ್ಟ್ 2025, 2:48 IST
ಆಲೂರು ಕಸಬಾ ಭೈರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಂಜಳಿಗೆ ಕಾಳಿಂಗಪ್ಪ ಅಸೋಸಿಯೇಷನ್ ವತಿಯಿಂದ ಉಚಿತವಾಗಿ ನೀಡಿರುವ ಸ್ಮಾರ್ಟ್‍ಕ್ಲಾಸ್ ಉದ್ಘಾಟಿಸಲಾಯಿತು. ಮಂಜುನಾಥ್, ಎ.ಜೆ. ಕೃಷ್ಣೇಗೌಡ, ನವೀನ್, ವೀರಭದ್ರಸ್ವಾಮಿ, ಮುಖ್ಯ ಶಿಕ್ಷಕಿ ಎಲಿಜಬೆತ್ ಇತರರು ಉಪಸ್ಥಿತರಿದ್ದರು.
ಆಲೂರು ಕಸಬಾ ಭೈರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಂಜಳಿಗೆ ಕಾಳಿಂಗಪ್ಪ ಅಸೋಸಿಯೇಷನ್ ವತಿಯಿಂದ ಉಚಿತವಾಗಿ ನೀಡಿರುವ ಸ್ಮಾರ್ಟ್‍ಕ್ಲಾಸ್ ಉದ್ಘಾಟಿಸಲಾಯಿತು. ಮಂಜುನಾಥ್, ಎ.ಜೆ. ಕೃಷ್ಣೇಗೌಡ, ನವೀನ್, ವೀರಭದ್ರಸ್ವಾಮಿ, ಮುಖ್ಯ ಶಿಕ್ಷಕಿ ಎಲಿಜಬೆತ್ ಇತರರು ಉಪಸ್ಥಿತರಿದ್ದರು.   

ಆಲೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಅನೇಕ ಶಾಲೆಗಳು ಮುಚ್ಚಿವೆ. ಸದ್ಯದ ತಂತ್ರಜ್ಞಾನ ಅಳವಡಿಸುವ ಮೂಲಕ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸಲು ಹಂಜಳಿಗೆ ಕಾಳಿಂಗಪ್ಪ ವೆಲಫೇರ್ ಅಸೋಸಿಯೇಷನ್ ಹಲವು ಉಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಸರ್ಕಾರಿ ಶಾಲೆಗಳಲ್ಲಿ ಈ ಹಿಂದೆ 8 ನೇ ತರಗತಿಯಿಂದ ಇಂಗ್ಲಿಷ್‌ ಕಲಿಕೆ ಪ್ರಾರಂಭಿಸಲಾಗಿದ್ದು, ಪ್ರಸಕ್ತ ವರ್ಷದಲ್ಲಿ ಪ್ರಾಥಮಿಕ ಶಾಲೆಗಳಿಗೂ ವಿಸ್ತರಿಸಿದೆ. ಆದರೂ ಪೋಷಕರು ಸರ್ಕಾರಿ ಶಾಲೆಗಳ ಶಿಕ್ಷಣ ಕಡೆಗಣಿಸಿ, ಖಾಸಗಿ ಶಾಲೆಗಳ ಮೊರೆ ಹೋಗಿದ್ದಾರೆ.

ಇದನ್ನು ಅರಿತ ಕೆ. ಹೊಸಕೋಟೆ ಹೋಬಳಿ ಹಂಜಳಿಗೆ ಗ್ರಾಮದ ನಿವಾಸಿ ಮಂಜುನಾಥ್, ಹಂಜಳಿಗೆ ಕಾಳಿಂಗಪ್ಪ ವೆಲಫೇರ್ ಅಸೋಸಿಯೇಷನ್ ಅಡಿಯಲ್ಲಿ 2012 ರಿಂದ ‘ನಮ್ಮ ನಡೆ ಸರ್ಕಾರಿ ಶಾಲೆ ಕಡೆ’ ಎಂಬ ಧ್ಯೇಯವನ್ನು ಇಟ್ಟುಕೊಂಡು ಕಾರ್ಯ ಆರಂಭಿಸಿದ್ದಾರೆ.

ADVERTISEMENT

ಸರ್ಕಾರಿ ಶಾಲೆಗಳನ್ನು ಉಳಿಸುವ ಉದ್ದೇಶದಿಂದ ತಾಲ್ಲೂಕಿನ 17 ಶಾಲೆಗಳಿಗೆ ಸ್ಮಾರ್ಟ್‍ಕ್ಲಾಸ್, 166 ಶಾಲೆಗಳ ವಿದ್ಯಾರ್ಥಿಗಳಿಗೆ ₹1 .25 ಲಕ್ಷ ನೋಟ್ ಬುಕ್‍ಗಳು, 6ಸಾವಿರ ಬ್ಯಾಗ್‍ಗಳು, ಲೇಖನಿ ಸಾಮಗ್ರಿಗಳನ್ನು ಈಗಾಗಲೆ ವಿತರಿಸಿದ್ದಾರೆ.

ಮಾಹಿತಿ ತಂತ್ರಜ್ಞಾನವನ್ನು ಬಾಲ್ಯದಲ್ಲೇ ಕಲಿಸಬೇಕೆಂಬ ಉದ್ದೇಶದಿಂದ ಹಲವು ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್‍ಗೆಂದು ಉಚಿತವಾಗಿ ಲ್ಯಾಪ್‍ಟಾಪ್, ಬೃಹತ್ ಟಿವಿ, ಪ್ರಿಂಟರ್ ಕೊಡುಗೆ ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.

ವಿಶೇಷವಾಗಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಮಕ್ಕಳಿಗೆ ಆಂಗ್ಲ ಶಿಕ್ಷಣ ಬೋಧಿಸಲು ಬೇಕಾದ ಕಂಪ್ಯೂಟರ್ ಉಪಕರಣಗಳನ್ನು ಕೊಡುತ್ತಿದ್ದು, ಅವುಗಳ ದುರಸ್ತಿ ಹೊಣೆಯನ್ನು ಸಹ ತೆಗೆದುಕೊಂಡಿದ್ದಾರೆ.

ತಾಲ್ಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಶಿಕ್ಷಣ ಕೊಡುವ ಉದ್ದೇಶದಿಂದ ‘ನಮ್ಮ ನಡೆ ಸರ್ಕಾರಿ ಶಾಲೆ ಕಡೆ’ ಎಂಬ ಅಭಿಯಾನ ಇಟ್ಟುಕೊಂಡು ಸ್ಮಾರ್ಟ್‍ಕ್ಲಾಸ್ ಪ್ರಾರಂಭ ಮಾಡುತ್ತಿದ್ದೇವೆ. ಎಲ್ಲ ಮಕ್ಕಳು ಕನ್ನಡ ಮತ್ತು ಇಂಗ್ಲಿಷ್ ಬೇಸಿಕ್ ಕಂಪ್ಯೂಟರ್ ಶಿಕ್ಷಣ ಪಡೆಯಲಿ ಎಂಬ ಉದ್ದೇಶ ಹೊಂದಲಾಗಿದೆ. ಮಕ್ಕಳು ಖಾಸಗಿ ಶಾಲೆ ವ್ಯಾಮೋಹ ಹೊರತುಪಡಿಸಿ ಎಲ್ಲರಂತೆ ಉನ್ನತ ಶಿಕ್ಷಣ ಪಡೆಯಬೇಕು ಎನ್ನುತ್ತಾರೆ ಅಸೋಸಿಯೇಶನ್‌ ಅಧ್ಯಕ್ಷ ಮಂಜುನಾಥ್.

ಪ್ರತಿ ಮಗು ತಂತ್ರಜ್ಞಾನದಿಂದ ವಂಚಿತರಾಗಬಾರದು ಎಂಬ ಮೂಲ ಉದ್ದೇಶದಿಂದ ಹಂಜಳಿಗೆ ಕಾಳಿಂಗಪ್ಪ ಅಸೋಸಿಯೇಷನ್ ಫಲಾಪೇಕ್ಷೆಯಿಲ್ಲದೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ
. ಎ. ಜೆ. ಕೃಷ್ಣೇಗೌಡ ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.