ಹಾವೇರಿ: ನಗರಸಭೆಯಲ್ಲಿನ ರಿಜಿಸ್ಟ್ರರ್ಗಳಲ್ಲಿ ಯಾವುದೇ ದಾಖಲಾತಿ ಇಲ್ಲದೇ ಅನಧಿಕೃತವಾಗಿ ಖಾತೆಗಳನ್ನು ದಾಖಲಿಸುವ ಮೂಲಕ ಅಕ್ರಮ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾದ ಪತ್ರವೊಂದರಲ್ಲಿ ನಗರಸಭೆ ಸದಸ್ಯ ಜಮಾದಾರ ಹಾಗೂ ಶಿವಯೋಗಿ ಅರಿಷಿಣದ ಹೆಸರುಗಳನ್ನು ಉಲ್ಲೇಖಿಸಲಾಗಿದೆ.
ನಗರಸಭೆಯ ಸದಸ್ಯರ ಒತ್ತಡದಿಂದಾಗಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾದ ಈ ಪ್ರಕರಣವು ಪ್ರತಿನಿತ್ಯ ತಿರುವು ಪಡೆದುಕೊಳ್ಳುತ್ತಿದ್ದು, ಅಧಿಕಾರಿಗಳಿಗೆ ಸಲ್ಲಿಕೆಯಾದ ಪತ್ರದಲ್ಲಿ ಹೆಸರು ಇರುವುದು ದಾಖಲೆಗಳಿಂದ ದೃಢಪಟ್ಟಿದೆ.
ಅಲ್ಲದೇ, ಈ ಹಿಂದೆ ಪ್ರಮುಖ ಹುದ್ದೆ ಅಲಂಕರಿಸಿದ್ದ ಸದಸ್ಯರೊಬ್ಬರು ಶಾಮೀಲಾಗಿದ್ದರೆ ಎಂಬ ಆರೋಪಗಳು ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ತನಿಖೆ ತೀವ್ರಗೊಂಡಂತೆ ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಒತ್ತಡ ಹೇರಿ ಅಕ್ರಮ ಎಸಗಿದ ಇನ್ನಷ್ಟು ಸದಸ್ಯರುಗಳ ಹೆಸರುಗಳು ಬಹಿರಂಗಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ಬೆಳವಣಿಗೆಯಲ್ಲಿ ಎಷ್ಟು ಸದಸ್ಯರ ಹೆಸರು ಬಹಿರಂಗಗೊಳ್ಳುವುದು, ಪ್ರಜಾ ಪ್ರತಿನಿಧಿ ಕಾಯ್ದೆ ಅನ್ವಯ ಅನರ್ಹತೆ ಅಥವಾ ಶಿಕ್ಷೆಗೆ ಗುರಿಯಾಗುವರು ಎಂಬ ಕುರಿತು ನಗರದಲ್ಲಿ ಈಗ ಚರ್ಚೆಗಳು ಶುರುವಾಗಿವೆ.
ಹಾವೇರಿ ನಗದಲ್ಲಿ ನಡೆದಿದೆ ಎನ್ನಲಾದ ಕಳಪೆ ಕಾಮಗಾರಿ, ಬೋಗಸ್ ಖಾತೆ, ಮಳಿಗೆ ಬಾಡಿಗೆ, ಅತಿಕ್ರಮಣ ಮತ್ತಿತರ ಅವ್ಯವಹಾರಗಳ ಬಗ್ಗೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಅವರು ಪೌರಾಯುಕ್ತರಿಂದ ವರದಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಐವರು ಸಿಬ್ಬಂದಿ ವಿರುದ್ಧ ಜಿಲ್ಲಾಧಿಕಾರಿ ಶಿಸ್ತುಕ್ರಮ ಕೈಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.