ADVERTISEMENT

ಬಿಸಿಲು; ಕುಡಿಯುವ ನೀರಿಗಾಗಿ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 9:25 IST
Last Updated 26 ಫೆಬ್ರುವರಿ 2012, 9:25 IST

ಹಾನಗಲ್: ಬೆಸಿಗೆಯ ಆರಂಭದ ಹಂತ ದಲ್ಲಿಯೇ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೊರಿದ್ದು, ಬಿಸಿಲಿನ ದಗೆಯಿಂದ ತತ್ತರಿಸಿರುವ ಸಾರ್ವಜನಿಕರು ಅಸಮರ್ಪಕ ನೀರು ಸರಬರಾಜು ವ್ಯವಸ್ಥೆಯಿಂದ ಮತ್ತಷ್ಟು ಬಸವಳಿಯುವಂತಹ ಪರಿಸ್ಥಿತಿ ತಲೆ ದೊರಿದೆ.

 ಇತ್ತೀಚಿನ ದಿನಗಳಲ್ಲಿ ಕೋಟಿಗಳ ಲೆಕ್ಕದಲ್ಲಿ ಹಾನಗಲ್ ಪಟ್ಟಣಕ್ಕೆ ಅನುದಾನಗಳ ಸುರಿಮಳೆಯಾಗುತ್ತಿದೆ. ಇದರಿಂದ ತರಾವರಿ ಯೋಜನೆಗಳು ಅನುಷ್ಠಾನಗೊಂಡು ಪಟ್ಟಣ ಸರ್ವಾಂಗೀಣ ಅಭಿವೃದ್ಧಿಯತ್ತ ಮುಂದಡಿ ಇಡುತ್ತಿದೆ. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್, ಸ್ವಚ್ಛತೆ ಬಗ್ಗೆ ಕ್ರಮ ಕೈಗೊಂಡು ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಅನುಷ್ಠಾನಗೊಂಡ ಯೋಜನೆಗಳ ಅಸಮರ್ಪಕ ನಿರ್ವಹಣೆಯ ಕಾರಣ ಜನರು ಪರಿತಪಿಸುವಂತಾಗಿರುವುದು ಮಾತ್ರ ದುರಂತ.

 ಬೆಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂಬ ಮುಂದಾಲೋಚನೆಯಿಂದ ಇಲ್ಲಿನ ಐತಿಹಾಸಿಕ ಬೃಹತ್ ಆನಿಕೆರೆಯನ್ನು ಕುಡಿಯುವ ನೀರಿಗಾಗಿ ಉಪ ಯೋಗಿಸಲು ಮುಂದಾದ ಹಾನಗಲ್ ಪುರಸಭೆ ಆನಿಕೆರೆ ನೀರನ್ನು ಸಂಗ್ರಹಿಸಿ ಶುದ್ಧೀಕರಿಸುವ ಮೂಲಕ ಪಟ್ಟಣಕ್ಕೆ ಸರಬರಾಜು ಮಾಡುವ ಯೋಜನೆ  ಕಳೆದ 3 ವರ್ಷಗಳಿಂದ ಕೈಗೊಂಡಿದೆ.

ಇದೀಗ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಆನೆಕೆರೆಯನ್ನು ರೂ. 3 ಕೋಟಿ 50 ಲಕ್ಷ  ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಮತ್ತು ತುಂಗಭದ್ರ ನದಿಯಿಂದ ಹಾನಗಲ್ಲಿಗೆ ಕುಡಿಯುವ ನೀರು ಪೂರೈಸುವ ರೂ. 70 ಕೋಟಿ ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನಗೊಳ್ಳುವ ಹಂತದಲ್ಲಿವೆ.

ಇಷ್ಟೆಲ ಯೋಜನೆಗಳು ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸುವಲ್ಲಿ ವಿಫಲವಾಗಿರುವುದಕ್ಕೆ ಮುಖ್ಯ ಕಾರಣ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿ ಕಾರ್ಯ ನಿರ್ವಹಣೆ ಎಂಬುದು ಹಾನಗಲ್ ನಿವಾಸಿಗಳ ಅಭಿಪ್ರಾಯವಾಗಿದೆ. ಸಾಕಷ್ಟು ನೀರು ಸಂಗ್ರಹವಿದ್ದರೂ ಅಸ ಮರ್ಪಕ ನೀರು ಪೂರೈಕೆಗೆ ಹಲವಾರು ಕಾರಣ ನೀಡುವ ಪುರಸಭೆ ಸಿಬ್ಬಂದಿ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು  ಮಾಡುತ್ತಿದ್ದಾರೆ.

ಯೋಜನೆ ಗಳನ್ನು ಸದ್ಭಳಕೆ ಮಾಡಿಕೊಂಡು ಪಟ್ಟಣಕ್ಕೆ ವ್ಯವಸ್ಥಿತವಾಗಿ ನೀರು ಪೂರೈಸುವ ಮೂಲಕ ಬೆಸಿಗೆಯ ಆರಂಭದಲ್ಲಿಯೇ ಕಂಡು ಬಂದಿರುವ ನೀರಿನ ಸಮಸ್ಯೆಯನ್ನು ಪ್ರಾರಂಭದ ಹಂತದಲ್ಲಿಯೇ ವ್ಯವಸ್ಥಿತವಾಗಿ ಬಗೆಹರಿಸಿ ಜನತೆಯ ಹಿಡಿಶಾಪದಿಂದ ಬಚಾವ್ ಆಗಬೇಕಾದ ಜವಾಬ್ದಾರಿ ಹಾನಗಲ್ ಪುರಸಭೆ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.