ADVERTISEMENT

`ಹಬ್ಬಗಳು ಒಂದು ಜಾತಿ, ಜನಾಂಗಕ್ಕೆ ಸೀಮಿತವಲ್ಲ'

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 6:23 IST
Last Updated 7 ಸೆಪ್ಟೆಂಬರ್ 2013, 6:23 IST

ಶಿಗ್ಗಾವಿ: ಜಾತ್ರೆ, ಹಬ್ಬಹರಿದಿನಗಳನ್ನು ಒಂದು ಜಾತಿ, ಜನಾಂಗಕ್ಕೆ ಸೀಮಿತಗೊಳ್ಳಿಸದೆ ಸರ್ವರು ಪಾಲ್ಗೊಂಡು ಆಚರಿಸಿದಾಗ ಮಾತ್ರ ಅದಕ್ಕೊಂದು ಅರ್ಥ ಬರಲು ಸಾಧ್ಯವಿದೆ.  ಅಂತಹ ಮನೋಭಾವನೆ ಪ್ರತಿಯೊ ಬ್ಬರಲ್ಲಿ ಮೂಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಿವಕುಮಾರ ಹೇಳಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದ ಕೋಟೆ ಆವರಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿ, ಗಣೇಶನ  ಮಂಟಪಕ್ಕಾಗಿ ಶೆಡ್ ಹಾಕುವಲ್ಲಿ ಜಾಗೆ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಂಜೆ ನಡೆದ ಎರಡು ಕೋಮಿನ ನಡುವಿನ ಮಾತಿನ ಚಕಮಕಿ, ವಾದ ನಿವಾರಣೆಗಾಗಿ ನಡೆದ ಈ ಸಭೆ ಸರ್ವರಿಗೆ ಸಮಾನತೆ ನೀಡುತ್ತಿದೆ. ಖಾಲಿ ಜಾಗೆಯ ಆಸ್ತಿ ಯಾರದು, ಯಾರ ಹೆಸರಲ್ಲಿದೆ ಎಂಬ ಪ್ರಶ್ನೆ ಮಾಡುವದು ಸರಿ ಯಾದ ಕ್ರಮವಲ್ಲ. ಅದಕ್ಕಾಗಿ ಕೆಲವು ಇಲಾಖೆಗಳಿವೆ ಅವುಗಳು ಈ ಕುರಿತು ಪರಿಶೀಲನೆ ನಡೆಸುತ್ತಿವೆ. ಪರಿಶೀಲನೆ ನಂತರ ಅದರ ಚರ್ಚೆ ಮಾಡೋಣ. ಈಗ ಗಣೇಶ ಹಬ್ಬಕ್ಕೆ ಯಾವುದೇ ತೊಂದರೆಯಾಗದಂತೆ  ಸರ್ವರು ಸೇರಿಕೊಂಡು ಅದ್ದೂರಿಯಾಗಿ ಆಚರಿಸೋಣ ಎಂದರು.

ಸುಮಾರು 28 ವರ್ಷಗಳಿಂದ ಇದೆ ಖಾಲಿ ಜಾಗೆಯಲ್ಲಿ ಟೆಂಪೋ ಚಾಲಕರು ಸೇರಿಕೊಂಡು ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತಾ ಬರುತ್ತಿದ್ದಾರೆ. ಆದರೆ ಈ ವರ್ಷದಲ್ಲಿ ಅವರಿಗೆ ತೊಂದರೆಯಾಗದಂತೆ ಹಬ್ಬವನ್ನು ಆಚರಿಸಲು ಅನುಕೂಲತೆ ಮಾಡೋಣ. ಬಂಕಾಪುರದ ಟ್ಟಣ ನಮ್ಮದು ಎಂಬ ಅಭಿಮಾನ ಪಡುವಂತೆ ಯಾಗಬೇಕು. ಸರ್ವರಲ್ಲಿ ಸೌಹಾರ್ದತೆ ಬದುಕು ಅವಶ್ಯವಾಗಿದೆ. ಗಣೇಶ ಹಬ್ಬದ ನಂತರ ಶೆಡ್ ತೆರವುಗೊಳಿಸಲು ಸ್ಥಳೀಯ ಆಡಳಿತದ ಆದೇಶವನ್ನು ಸರ್ವರು  ಪಾಲಿಸಬೇಕು ಎಂದು ಹೇಳಿದರು.

ಉಪವಿಭಾಗಾಧಿಕಾರಿ ಶರಣಬಸಪ್ಪ ಕೊಟೆಪ್ಪ ಗೋಳ, ತಹಸೀಲ್ದಾರ ಎಂ.ಬಿ.ಪಾಟೀಲ, ಡಿವೈಎಸ್‌ಪಿ ಬಿ.ವೈ.ಬೆಳ್ಳುಬ್ಬಿ, ಮುಖ್ಯಾಧಿಕಾರಿ ಧರಣೆಂದ್ರ, ಉಪ ತಹಸೀಲ್ದಾರ ಭಂಗಿ ಮತ್ತು ಹಿಂದು, ಮುಸ್ಲಿಂ ಸಮಾಜದ ಅನೇಕ  ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.