ADVERTISEMENT

‘ಗುಣಮಟ್ಟದ ವಸತಿ ಶಾಲೆ ನಿರ್ಮಾಣದ ಗುರಿ’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 9:14 IST
Last Updated 23 ಡಿಸೆಂಬರ್ 2013, 9:14 IST

ಹಾನಗಲ್‌: ‘ಪ್ರತಿ ಹೋಬಳಿಗೊಂದು ಅಂತರ ರಾಷ್ಟ್ರೀಯ ಗುಣಮಟ್ಟದ ವಸತಿ ಶಾಲೆ ನಿರ್ಮಿ ಸುವ ಉದ್ದೇಶ ಸರ್ಕಾರಕ್ಕಿದೆ’ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಎಚ್‌.ಆಂಜನೇಯ ಹೇಳಿದರು.

ತಾಲ್ಲೂಕಿನ ಸೋಮಸಾಗರ ಗ್ರಾಮದಲ್ಲಿ ಭಾನು ವಾರ ₨ 65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಗತಿಪರರು, ದಲಿತ ಮುಖಂಡರ ಹೋರಾ ಟದ ಹಿನ್ನೆಲೆ ಮತ್ತು ಸರ್ಕಾರದ ಸದುದ್ದೇಶದಿಂದ ವಿವಿಧ ಇಲಾಖೆಗಳ ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಮೊರಾರ್ಜಿ, ರಾಣಿ ಚನ್ನಮ್ಮ ಸೇರಿದಂತೆ ನಮ್ಮ ಇಲಾಖೆಯ ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಹಿಂದುಳಿದ ಸಮಾಜವನ್ನು ಸರ್ವ ವಿಧದಲ್ಲಿ ಅಭಿವೃದ್ಧಿಗೊಳಿಸಲು ಮಹತ್ವ ನೀಡಲಾಗುತ್ತಿದೆ. ಶಿಕ್ಷಣದಿಂದ ಪ್ರಗತಿ ಎಂಬ ಅಂಶಗಳ ದೃಷ್ಟಿಯಿಂದ ಸರ್ಕಾರ ಕ್ರಾಂತಿಕಾರಕ ನೀತಿಗಳನ್ನು ಅಳವಡಿಸಿಕೊಳ್ಳುತ್ತಿದೆ’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಮನೋ ಹರ ತಹಸೀಲ್ದಾರ್‌, ‘ಸರ್ಕಾರ ಕೋಟಿಗಟ್ಟಲೇ ಅನುದಾನ ವ್ಯಯಿಸಿ ನಿರ್ಮಿಸುವ ಕಟ್ಟಡಗಳು ಗುಣಮಟ್ಟದಿಂದ ಕೂಡಿರಬೇಕು. ದೀಘ್ರ ಬಾಳಿಕೆ ಬರುವಂತಾಗಬೇಕು. ಆದರೆ ಈಗ ಉದ್ಘಾಟನೆ ಗೊಂಡ ಕಟ್ಟಡ ಕಾಮಗಾರಿ ಕಳಪೆಯಾಗಿರುವ ಅರಿವಿರುವ ಸಚಿವರು ಈ ಸಂಬಂಧ ಕ್ರಮ ಕೈಗೊಳ್ಳುತ್ತಾರೆ’ ಎಂದರು. ಅಲ್ಲದೇ ಜಿಲ್ಲೆಯ ವಿವಿಧ ವಸತಿ ನಿಲಯಗಳ ಮೂಲ ಸೌಲಭ್ಯಕ್ಕಾಗಿ ₨ 5 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ಮಾಡಿದರು.

‘ಜಿಲ್ಲೆಯ ಎಲ್ಲ ಕುಡಿಯುವ ನೀರು ಸರಬ ರಾಜಿನ ಜಲಾಗಾರಗಳನ್ನು ಯಂತ್ರಗಳ ಮೂಲಕ ಸ್ವಚ್ಛಗೊಳಿಸುವ ಯೋಜನೆಗೆ ಸರ್ಕಾರಕ್ಕೆ ಜಿಲ್ಲಾ ಪಂಚಾಯತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಜಿ.ಪಂ. ಅಧ್ಯಕ್ಷ ರಾಜೇಂದ್ರ ಹಾವೇರಣ್ಣ ನವರ ಹೇಳಿದರು.

ಜಿ.ಪಂ. ಉಪಾಧ್ಯಕ್ಷ ಶೋಭಾ ನಿಸ್ಸಿಮಗೌಡ್ರ, ಸದಸ್ಯ ಬಸವರಾಜ ಹಾದಿಮನಿ, ತಾ.ಪಂ. ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಉಪಾಧ್ಯಕ್ಷೆ ಅನಿತಾ ಶಿವೂರ, ಸದಸ್ಯೆ ವಿಜಯಾ ಹಿರೇಮಠ, ಗ್ರಾಪಂ ಅಧ್ಯಕ್ಷ ದಾವಲಸಾಬ ನಾಗ ನೂರ, ಆರ್‌.ಎಸ್‌. ಪಾಟೀಲ ಹಾಜರಿದ್ದರು.

ಸಚಿವ ಸ್ಥಾನಕ್ಕೆ ಒತ್ತಾಯ

ಹಾನಗಲ್‌ ಶಾಸಕ ಮನೋಹರ ತಹಸೀ ಲ್ದಾರ್‌ ಅವರನ್ನು ಮಂತ್ರಿ ಮಾಡುವ ವಿಚಾ ರದ ಒತ್ತಾಯಕ್ಕೆ ಸಚಿವ ಎಚ್‌.ಆಂಜನೇಯ ಒಳಗಾದರು. ಸಚಿವ ಆಂಜನೇಯ ಭಾಷಣದ ಸಂದರ್ಭದಲ್ಲಿ ಗ್ರಾಮಸ್ಥರು ಶಾಸಕ ಮನೋ ಹರ ತಹಸೀಲ್ದಾರ್‌  ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT