ಶಿಗ್ಗಾವಿ: ಭಾರತೀಯರ ಧರ್ಮಸಂಸ್ಕಾರಗಳು ಪರಂಪರಾಗತವಾಗಿ ಮಠಮಂದಿರಗಳ ತಳಹದಿಯ ಮೇಲೆ ಮುನ್ನಡೆಯುತ್ತಿವೆ. ಅದರಿಂದಾಗಿ ಸರ್ಕಾರ ಮೂಢನಂಬಿಕೆಗಳ ವಿರುದ್ಧ ಹೊಸ ಕಾಯ್ದೆ ರೂಪಿಸುವುದು ಸರಿಯಾದ ಕ್ರಮವಲ್ಲ ಎಂದು ವೀರಶೈವ ಮಹಾಸಭಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಾಗೀಶ ಪ್ರಸಾದ ಹೇಳಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹುಚ್ಚೇಶ್ವರಮಠದಲ್ಲಿ ಗುರುವಾರ ನಡೆದ 9ನೇ ವರ್ಷದ ಇಷ್ಟಲಿಂಗ ಮಹಾಪೂಜೆ, ಸಿದ್ಧಾಂತ ಶಿಖಾಮಣಿ ಮತ್ತು ಭಗವದ್ಗೀತೆ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಆರ್.ಎಸ್.ಅರಳೆಲೆಹಿರೇಮಠ ಮಾತನಾಡಿ, ಬಾಹ್ಯವಿರೋಧಿಗಳಿಗಿಂತ ಆಂತರಿಕವಾಗಿ ನಮ್ಮಲ್ಲಿರುವ ವಿರುದ್ಧಶಕ್ತಿಯನ್ನು ತೆಗೆದು ಹಾಕುವ ಮೂಲಕ ಧರ್ಮದ ದಾರಿಯಲ್ಲಿ ನಡೆಸಲು ಶಿದ್ದಾಂತ ಶಿಖಾಮಣಿ ಗ್ರಂಥಗಳು ಅವಶ್ಯವಾಗಿದೆ ಎಂದರು.
ಹುಬ್ಬಳ್ಳಿ ಪಂಚಗ್ರಹ ಹಿರೇಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸದ್ಗುರುವಿನ ಉಪದೇಶಗಳಿಂದ ಮನುಕುಲದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ ಎಂದರು.
ಕಾಶಿಪೀಠದ ಜಗದ್ಗರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಮುಕ್ತಿ ಮಾರ್ಗಕ್ಕಾಗಿ ಭಕ್ತಿ ದಾರಿ ಅವಶ್ಯವಾಗಿದೆ. ಅದಕ್ಕೆ ಸಿದ್ದಾಂತ ಶಿಖಾಮಣಿ ಗ್ರಂಥ ಅಧ್ಯಯನ ಅಗತ್ಯವಾಗಿದೆ ಎಂದರು.
ಹೊತ್ನಹಳ್ಳಿ ಶಾಂತವೀರಮಠದ ಶಂಭುಲಿಂದ ಸ್ವಾಮೀಜಿ, ಹಾವೇರಿ ಎಲ್ಐಸಿ ಅಧಿಕಾರಿ ವಿ.ಜಿ.ಹರ್ಲಾಪುರ, ಮುಂಬೈ ವ್ಯಾವಾರಸ್ಥ ಆರ್.ಬಿ.ಹೆಬ್ಬಳ್ಳಿ, ಬಿ.ಟಿ.ವಿರೇಶ ಮತ್ತಿತರರು ಉಪಸ್ಥಿತರಿದ್ದರು.
ಸಿದ್ದಾಂತ ಶಿಖಾಮಣಿ ಹೊಸ ಆವೃತಿ ಗ್ರಂಥ ಬಿಡುಗಡೆ ಹಾಗೂ ಕಾಶಿಪೀಠದ ವೆಬ್ಸೈಟ್ ಅನ್ನು ಬಿಡುಗಡೆ ಮಾಡಲಾಯಿತು.
ಪರಶುರಾಮ ನರೇಗಲ್ಲ ಸಂಗಡಿಗರು ಸಂಗೀತ ಸೇವೆ ನೀಡಿರು. ಗಂಗೂಬಾಯಿ ದೇಸಾಯಿ ಸ್ವಾಗತಿಸಿದರು. ಸಿ.ಎನ್.ಶಿಗ್ಗಾವಿ ನಿರೂಪಿಸಿದರು. ಬಂಕಾನಾಥ ಮಹಿಳಾ ರುದ್ರಬಳಗದಿಂದ ರುದ್ರಪಠಣ ಜರುಗಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.