ಶಿಗ್ಗಾವಿ: ಗ್ರಾಮೀಣ ಪ್ರದೇಶದ ಜನರಿಂದ ತುಂಬಿ ತುಳುಕುವ ತಾಲ್ಲೂಕಿನ ಬಂಕಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯರ ಕೊರತೆಯಿಂದ ನರಳುವಂತಾಗಿದೆ. ಮೂಲ ಸೌಕರ್ಯಗಳ ಕೊರತೆಯೂ ಕಾಡುತ್ತಿದೆ.
30 ಹಾಸಿಗೆ ಹೊಂದಿರುವ ಸರ್ಕಾರಿ ಆಸ್ಪತ್ರೆಗೆ ವೈದ್ಯರ, ಸ್ಟಾಫ್ ನರ್ಸ್ಗಳ ಕೊರತೆ ಕಾಡುತ್ತಿದೆ. ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೇ ದೂರದ ನಗರ, ಪಟ್ಟಣಗಳ ಆಸ್ಪತ್ರೆಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡುವಂತಾಗಿದೆ. ಬಂಕಾಪುರ ಪಟ್ಟಣದ ಹೋಬಳಿ ಮಟ್ಟದ ಸುತ್ತಲಿನ ಗ್ರಾಮಗಳ ಸಂಖ್ಯೆ ಹೆಚ್ಚಿರುವುದರಿಂದ ಗ್ರಾಮೀಣ ಜನರ ಸಂಖ್ಯೆ ಇಲ್ಲಿ ಹೆಚ್ಚಾಗಿರುತ್ತದೆ.
ಹಲವು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನೀಡುವ ವೈದ್ಯರಿದ್ದರು. ಈಚೆಗೆ ಅನಸ್ತೇಷಿಯಾ ವೈದ್ಯರ ಹುದ್ದೆ ರದ್ದು ಪಡಿಸಲಾಗಿದೆ. ಅದರಿಂದಾಗಿ ಗ್ರಾಮೀಣ ಪ್ರದೇಶದ ಬಡಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಶಸ್ತ್ರ ಚಿಕಿತ್ಸೆಗಳಿಗಾಗಿ ಬೇರೆ ಆಸ್ಪತ್ರೆಗಳಿಗೆ ಹೋಗುವುದು ಅನಿವಾರ್ಯವಾಗಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ನೀಡಲಾಗಿರುವ ಅನಸ್ತೇಷಿಯಾ ವೈದ್ಯರ ಹುದ್ದೆಯನ್ನು ಬಂಕಾಪುರ ಆಸ್ಪತ್ರೆಗೂ ನೀಡಬೇಕು. ಶಸ್ತ್ರ ಚಿಕಿತ್ಸೆಗಳು ನಡೆಯುವಂತಾಗಬೇಕು ಎಂದು ಬಂಕಾಪುರದ ನಿವಾಸಿ ರವಿ ನರೆಗಲ್ಲ ಆಗ್ರಹಿಸಿದ್ದಾರೆ.
‘ನಿತ್ಯ ಆಸ್ಪತ್ರೆಯಲ್ಲಿ 300ರಿಂದ 400 (ಒಪಿಡಿ)ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. 10ರಿಂದ 15 ಒಳ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ನೇತ್ರ ಮತ್ತು ಜನರಲ್ ವೈದ್ಯರಿಲ್ಲ. 3 ನರ್ಸ್ಗಳ ಕೊರತೆಯಿದೆ. ತಿಂಗಳಲ್ಲಿ 40ರಿಂದ 50 ಹೆರಿಗೆ ಆಗುತ್ತಿವೆ. ಬೇಡಿಕೆಯಷ್ಟು ಔಷಧ ಪೂರೈಕೆ ಆಗುತ್ತಿದೆ. ನವಜಾತ ಶಿಶುಗಳ ಆರೈಕೆ ಕೇಂದ್ರ ತೆರೆಯುವ ಮೂಲಕ ಶಿಶುಗಳ ಸಂರಕ್ಷಣೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದ್ದ ವೈದ್ಯರು, ನರ್ಸ್ಗಳು ಹೆಚ್ಚಿನ ಅವಧಿ ಕೆಲಸ ಮಾಡುವ ಮೂಲಕ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ’ ಮುಖ್ಯವೈದ್ಯಾಧಿಕಾರಿ ಮನೋಜ ನಾಯಕ್ ತಿಳಿಸಿದರು.
ಆಸ್ಪತ್ರೆಯ ಸುತ್ತಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳು ಭಯ ಭೀತರಾಗುವಂತಾಗಿದೆ. ರಾತ್ರಿ ವೇಳೆ ರೋಗಿಗಳು ಹೊರ ಹೋಗಲು ಭಯಪಡುವಂತಿದೆ. ಹಲವು ಬಾರಿ ರೋಗಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ ಉದಾಹರಣೆಗಳಿವೆ. ತಕ್ಷಣ ಪುರಸಭೆ ಅಧಿಕಾರಿಗಳು ಬೀದಿ ನಾಯಿಗಳನ್ನು ನಿಯಂತ್ರಿಸಬೇಕು ಎಂದು ಇಲ್ಲಿಯ ರೋಗಿಗಳು ಒತ್ತಾಯಿಸಿದ್ದಾರೆ.
‘ಆಸ್ಪತ್ರೆಯಲ್ಲಿ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಮಳೆ ಬಂದರೆ ಆಸ್ಪತ್ರೆ ಸೋರುತ್ತಿದೆ. ಕಾಂಪೌಂಡ್ ಗೋಡೆ ಸುತ್ತಲೂ ಇರುವ ಕೊಳಚೆ ನೀರು ಆಸ್ಪತ್ರೆಗೆ ನುಗ್ಗುತ್ತಿದೆ. ತಕ್ಷಣ ಸರಿಯಾದ ಕಾಂಪೌಂಡ್ ಗೋಡೆಗಳ ನಿರ್ವಾಣವಾಗಬೇಕು. ಆಸ್ಪತ್ರೆ ಸುತ್ತಲೂ ನಿಂತ ಕೊಳಚೆ ನೀರು ಹರಿದು ಹೊರ ಹೋಗುವಂತೆ ಮಾಡಬೇಕು’ ಎಂದು ಸಮಾಜ ಸೇವಕ ರುದ್ರೇಶ ಪವಾಡಿ ಆಗ್ರಹಿಸಿದ್ದಾರೆ.
ಪಾಳು ಬಿದ್ದ 16 ವಸತಿ ನಿಲಯಗಳು
ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿನ 16 ಕ್ವಾರ್ಟರ್ಸ್ (ವಸತಿನಿಲಯ) ಪಾಳು ಬಿದ್ದಿವೆ. 7 ಕ್ವಾರ್ಟರ್ಸ್ಗಳಲ್ಲಿ ನರ್ಸ್ ವಾಸಿಸುತ್ತಿದ್ದಾರೆ. ಪಾಳು ಬಿದ್ದರುವ ಕ್ವಾರ್ಟರ್ಸ್ಗಳ ಸುತ್ತ ದನಕರುಗಳು ಹುಲ್ಲು ಮೇಯುತ್ತವೆ. ಹಂದಿ–ನಾಯಿಗಳು ವಾಸಿಸುವ ತಾಣವಾಗಿದೆ. ರಾತ್ರಿ ವೇಳೆ ಕುಡಕರ ಹಾವಳಿ ಹೆಚ್ಚಾಗುತ್ತಿದೆ. ಕೆಲವು ಕಟ್ಟಡಗಳ ಗೋಡೆಗಳು ಬಿದ್ದಿವೆ.
ಹೀಗಾಗಿ ನರ್ಸ್ ಮತ್ತು ವೈದ್ಯರು ವಾಸಿಸಲು ಸಾಧ್ಯವಿಲ್ಲದಂತಾಗಿದೆ. ಅದರಿಂದಾಗಿ ರಾತ್ರಿ ವೇಳೆ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದಂತಾಗಿದೆ. ತಕ್ಷಣ ಸುಸಜ್ಜಿತ ಕ್ವಾರ್ಟರ್ಸ್ಗಳ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು. ಆಗ ವೈದ್ಯರು ಸರ್ಕಾರದ ಆದೇಶದಂತೆ ಆಸ್ಪತ್ರೆ ಆವರಣದಲ್ಲಿ ವಾಸಿಸುತ್ತಾರೆ. ರೋಗಿಗಳಿಗೆ ಸರಿಯಾದ ಚಿಕಿತ್ಸೆ ಲಭಿಸುತ್ತದೆ. ಮೇಲಧಿಕಾರಿಗಳು ಜನಪ್ರತಿನಿಧಿಗಳು ಈ ಕಡೆ ಗಮನ ಹರಿಸಬೇಕು ಎಂದು ರೈತ ಸಂಘದ ಮುಖಂಡರಾದ ದೇವೇಂದ್ರಪ್ಪ ಹಳವಳ್ಳಿ ಶಂಭು ಕುರಗೋಡಿ ಬಸಲಿಂಗಪ್ಪ ಮಲ್ಲೂರ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.