ಹಾವೇರಿ: ಕೋವಿಡ್ ಎರಡನೇ ಅಲೆಯ ಲಾಕ್ಡೌನ್ ಘೋಷಣೆಯಿಂದ ಸಂಕಷ್ಟದಲ್ಲಿರುವಹೂವು, ಹಣ್ಣು, ತರಕಾರಿ ಬೆಳೆಗಾರರು, ಕ್ಷೌರಿಕರು, ಶ್ರಮಿಕರು, ಆಟೊ ಟ್ಯಾಕ್ಸಿ ಚಾಲಕರು ಹಾಗೂ ಕಾರ್ಮಿಕರಿಗೆ ತ್ವರಿತ ಪರಿಹಾರ ವಿತರಣೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ಪರಿಹಾರ ಪ್ಯಾಕೇಜ್ ಫಲಾನುಭವಿಗಳ ಗುರುತಿಸುವ ಕುರಿತಂತೆ ನೋಡಲ್ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಸರ್ಕಾರದ ಮಾರ್ಗಸೂಚಿಯಂತೆ ಅರ್ಹರನ್ನು ಗುರುತಿಸಿ ಈ ಕುರಿತಂತೆ ಇಲಾಖಾವಾರು ಪ್ರಚಾರ ನೀಡಿ ಜನರಿಗೆ ಮಾಹಿತಿ ನೀಡಿ, ಅರ್ಹರಿಗೆ ಸರ್ಕಾರದ ಪರಿಹಾರ ತಲುಪಿಸುವ ನಿಟ್ಟಿನಲ್ಲಿ ಕ್ರಮವಹಿಸಿ ಎಂದರು.
ಈಗಾಗಲೇ ತೋಟಗಾರಿಕೆ ಇಲಾಖಾ ಅಧಿಕಾರಿಗಳು 2021-22ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ಗೆ ₹10 ಸಾವಿರಗಳಂತೆ ಗರಿಷ್ಠ ಒಂದು ಹೆಕ್ಟೇರ್ಗೆ ಮಿತಿಗೊಳಿಸಿ ಪರಿಹಾರ ಧನವನ್ನು ವಿತರಿಸಲು ಆದೇಶಿಸಲಾಗಿದೆ.
ಪರಿಹಾರ ಧನವನ್ನು 2020-21ನೇ ಸಾಲಿನ ಬೆಳೆ ಸಮೀಕ್ಷೆಯಲ್ಲಿ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಳು ನಮೂದಾಗಿರುವ ರೈತರಿಗೆ ಮಾತ್ರ ಪರಿಹಾರ ಧನವನ್ನು ವಿತರಿಸಲು ಸರ್ಕಾರದ ಮಾರ್ಗಸೂಚಿಯಲ್ಲಿ ಅವಕಾಶವಿದೆ. ಹಸಿರು ಪೋರ್ಟಲ್ನಲ್ಲಿ ರೈತರು ನೋಂದಾಯಿಸಿಕೊಳ್ಳುವಂತೆ ತೋಟಗಾರಿಕಾ ಉಪನಿರ್ದೇಶಕರು ಕ್ರಮವಹಿಸುವಂತೆ ಸೂಚನೆ ನೀಡಿದರು.
ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸೇವಾ ಫೋರ್ಟನಲ್ಲಿ ನೋಂದಣಿ ಮಾಡಲು ಕಾರ್ಮಿಕ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು. ಆಧಾರ್ ಲಿಂಕ್, ಬ್ಯಾಂಕ್ ಖಾತೆ ಹಾಗೂ ಲೇಬರ್ ಕಾರ್ಡ್ ಹೊಂದಿದ ಹಾಗೂ ಇಲಾಖೆಯ ನಿಯಮಾವಳಿ ಪ್ರಕಾರ ವರ್ಷಕ್ಕೆ ಕನಿಷ್ಠ 90 ದಿನ ಕೆಲಸ ಮಾಡಿರಬೇಕು. ಈ ಕುರಿತಂತೆ ಮಾರ್ಗಸೂಚಿ ಅನುಸಾರ ಅರ್ಹ ಫಲಾನುಭವಿಗಳಿಗೆ ಪರಿಹಾರ ದೊರಕುವಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಕೋವಿಡ್ ನಿರ್ವಹಣೆಗಾಗಿ ಪ್ರತಿ ಗ್ರಾಮ ಪಂಚಾಯತಿಗೆ ಎಸ್.ಡಿ.ಆರ್.ಎಫ್. ನಿಧಿಯಿಂದ ತಲಾ ₹50 ಸಾವಿರ ಮುಂಗಡ ಹಣ ನೀಡಲಾಗಿದೆ. ಎಸ್.ಡಿ.ಎಫ್. ಮಾರ್ಗಸೂಚಿಯಂತೆ ಅನುದಾನ ವೆಚ್ಚ ಮಾಡಲು ಸಲಹೆ ನೀಡಿದರು.
ಸಾಲ ಪಾವತಿ ಮುಂದೂಡಿಕೆ:
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಭೂ ಅಭಿವೃದ್ಧಿ ಬ್ಯಾಂಕ್ಗಳಿಂದ ಪಡೆದಿರುವ ಸಣ್ಣ, ಮಧ್ಯಮ ಮತ್ತು ದೀರ್ಘಾವಧಿ ಸಾಲದ ಕಂತುಗಳನ್ನು ಮರುಪಾವತಿ ಮಾಡಲು 31 ಜುಲೈ 2021ರವರೆಗೆ ವಿಸ್ತರಿಸಲಾಗಿದೆ. ಈ ಕುರಿತಂತೆ ಸಹಕಾರಿ ಸಂಘದ ಉಪನಿಬಂಧಕರು ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮಬಾಬಾ ಮುದ್ದೇಬಿಹಾಳ, ತೋಟಗಾರಿಕೆ ಅಧಿಕಾರಿ ವಿಶ್ವನಾಥ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.