ಹಾವೇರಿ: ‘ಮನೆಯಲ್ಲಿರುವ ಹಿರಿಯ ನಾಗರಿಕರನ್ನು ಕಡೆಗಣಿಸಲಾಗುತ್ತಿದೆ. ಕೆಲ ಕುಟುಂಬಗಳಲ್ಲಿ ವಯೋವೃದ್ಧರನ್ನು ವೃದ್ಧಾಶ್ರಮಗಳಿಗೆ ಕಳುಹಿಸಲಾಗುತ್ತಿದೆ. ಎಲ್ಲರೂ ಗೌರವದಿಂದ ಕಾಣಬೇಕು’ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿ.ಆರ್. ಗುಡಿ ಹೇಳಿದರು.
ನಗರದ ಜಿಲ್ಲಾ ನಿವೃತ್ತ ನೌಕರ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇತರ ಸಂಘಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಗುರುವಾರ ನಡೆದ ಕಾನೂನು ಅರಿವು– ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದೆ, ಮನೆಯಲ್ಲಿ ಹಿರಿಯರ ಮಾತುಗಳೇ ವೇದವಾಕ್ಯಗಳಾಗಿದ್ದವು. ಆದರೆ, ಇಂದು ತಿರಸ್ಕಾರ ಭಾವದಿಂದ ಕಾಣಲಾಗುತ್ತಿದೆ. ಬದಲಾದ ಕಾಲದಲ್ಲಿ ವಯೋವೃದ್ಧರಲ್ಲಿ ವಯೋಸಹಜ ಸಂಬಂಧಿ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳು ಹೆಚ್ಚು ಕಾಡುತ್ತವೆ. ಇಂತಹ ಸಂದರ್ಭದಲ್ಲಿ ಮನೆಯ ಕುಟುಂಬದ ಸಹ ಸದಸ್ಯರ ನೆರವು, ಬೆಂಬಲ, ಗೌರವ ನೀಡುವ ಮೂಲಕ ನೆಮ್ಮದಿಯ ಜೀವನಕ್ಕೆ ನಾವೆಲ್ಲ ಜೊತೆಯಾಗಬೇಕು. ಹಿರಿಯರನ್ನು ಕಡೆಗಣಿಸಿ ವೃದ್ಧಾಶ್ರಮಗಳಿಗೆ ಮೊರೆ ಹೋಗುವಂತೆ ನಡೆದುಕೊಳ್ಳಬಾರದು’ ಎಂದು ಸಲಹೆ ನೀಡಿದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ ಪಾವಲಿ ಮಾತನಾಡಿ, ‘ಹಿರಿಯ ನಾಗರಿಕರಿಗೆ ಕುಟುಂಬ ಹಾಗೂ ಸಮಾಜದಲ್ಲಿ ಸಿಗುವಂತಹ ಗೌರವ ಕಡಿಮೆಯಾಗುತ್ತಿದೆ, ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ, ಮಾನವನ ನೈತಿಕ ಮಟ್ಟ ಕುಂಠಿತಗೊಳ್ಳುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಣ್ಣಪ್ಪನವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿಗಳಾದ ಪಿ.ಎಂ. ಬೆನ್ನೂರ ಅವರು ಪಾಲಕರ ಕಲ್ಯಾಣ ಮತ್ತು ಯೋಗಕ್ಷೇಮಗಳ ಬಗ್ಗೆ ಇರುವ ಕಾನೂನು ಹಾಗೂ ಕಾನೂನು ಪ್ರಾಧಿಕಾರದಿಂದ ಹಿರಿಯ ನಾಗರಿಗೆ ಸಿಗುವಂತಹ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು. ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ನಿವೃತ್ತ ನೌಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಬಿ ಅಣ್ಣಿಗೇರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.