ಹಾವೇರಿ: ಶ್ರಾವಣ ಮಾಸದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾವೇರಿಯ ಗೌರಿಮಠದಲ್ಲಿ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಪೂಜಾ ಅನುಷ್ಠಾನವನ್ನು ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಂಪನ್ನಗೊಳಿಸಿದರು.
ಭಾರತೀಯ ಪರಂಪರೆಯು ಅತೀ ಶ್ರೇಷ್ಠವಾಗಿದ್ದು, ಆಧ್ಯಾತ್ಮಿಕತೆ ಅದರ ತಳಹದಿಯಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ನಾಡಿನಲ್ಲಿ ಶ್ರಾವಣ ಮಾಸವು ತನ್ನದೇ ಆದ ವಿಶೇಷ ಪರಂಪರೆ ಮತ್ತು ವೈಶಿಷ್ಟ್ಯವನ್ನು ಹೊಂದಿದೆ. ಹಬ್ಬಗಳ ನಾಡಾದ ಇಲ್ಲಿ ಈ ತಿಂಗಳಿನಿಂದ ಹಬ್ಬಗಳು ಪ್ರಾರಂಭವಾಗುತ್ತವೆ. ಶ್ರಾವಣದಲ್ಲಿ ಉತ್ತಮವಾದ ಆಧ್ಯಾತ್ಮಿಕ ವಿಚಾರಗಳನ್ನು ಶ್ರವಣ ಮಾಡುವುದರಿಂದ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.
ಶ್ರಾವಣದಲ್ಲಿ ಶಿವಪೂಜಾನುಷ್ಠಾನ, ನಿತ್ಯ ರುದ್ರಾಭಿಷೇಕ, ಶತನಾಮಾವಳಿ ಸೇರಿದಂತೆ ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದು ಪೂಜಾನುಷ್ಠಾನವು ಮಂಗಲವಾಯಿತು.
ಜಗತ್ತು ಇಂದು ಕೊರೊನಾದಿಂದ ನಲುಗಿದ್ದು, ಇತ್ತೀಚಿಗೆ ಕರ್ನಾಟಕದಲ್ಲಿ ನೆರೆ ಹಾವಳಿ ಸೇರಿದಂತೆ ಹಲವಾರು ವೈಪರೀತ್ಯಗಳು ಆಗುತ್ತಿವೆ. ಈ ಎಲ್ಲಾ ಸಮಸ್ಯೆಗಳಿಂದ ಜಗತ್ತು ಮುಕ್ತವಾಗಿ, ಶಾಂತಿ ನೆಮ್ಮದಿ ದೊರೆಯುವಂತೆ ಮಾಡುವ ಸಂಕಲ್ಪದಿಂದ ಪೂಜಾ ಕಾರ್ಯವನ್ನು ಕೈಗೊಳ್ಳಲಾಯಿತು ಎಂದು ಸ್ವಾಮೀಜಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.