ಕಲಬುರ್ಗಿ: ‘ಜಿಲ್ಲೆಯ ಚಿಂಚೋಳಿಯಲ್ಲಿ ಜನವರಿ 20 ಮತ್ತು 21ರಂದು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ತಿಳಿಸಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಸಿಲು ನಾಡಿನ ಹಸಿರು ಪ್ರದೇಶವಾಗಿರುವ ಚಿಂಚೋಳಿ ತೆಲಂಗಾಣಕ್ಕೆ ಹೊಂದಿಕೊಂಡಿರುವ ಗಡಿ ಭಾಗ.
ಈ ಪ್ರದೇಶದಲ್ಲಿ ಮಕ್ಕಳ ಮಾರಾಟ, ಗುಜ್ಜರ್ಕಿ ಶಾದಿ, ಮೂಢನಂಬಿಕೆ ಹೆಚ್ಚಾಗಿದೆ. ಇವುಗಳ ಮೇಲೆ ಸಮ್ಮೇಳನ ಬೆಳಕು ಚೆಲ್ಲಲಿದೆ. ಎರಡು ದಿನಗಳ ಕಾಲ 4 ಗೋಷ್ಠಿ, 2 ಕವಿಗೋಷ್ಠಿ, 2 ಉಪನ್ಯಾಸ ನಡೆಯಲಿವೆ’ ಎಂದು ವಿವರಿಸಿದರು.
‘ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಚನ್ನವೀರ ಶಿವಾಚಾರ್ಯ ಅವರನ್ನು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಶ್ರೀಗಳು ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 15 ವಿಷಯ ವಚನ ಸಂಪುಟ ಮತ್ತು ಅನುಭಾವ ಪ್ರಚಾರ ಉಪನ್ಯಾಸ ಮಾಲೆಯ 77 ಕೃತಿಗಳನ್ನು ಪ್ರಕಟಿಸಿದ್ದಾರೆ’ ಎಂದರು.
‘ಕಾರ್ಯಾಧ್ಯಕ್ಷರಾಗಿ ಶಾಸಕ ಡಾ. ಉಮೇಶ ಜಾಧವ್ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು. ಪರಿಷತ್ತಿನ ಗೌರವ ಕಾರ್ಯದರ್ಶಿ ವಿಜಯಕುಮಾರ ಪರೂತೆ, ಗೌರವ ಕೋಶಾಧ್ಯಕ್ಷ ದೌಲತ್ರಾಯ ಮಾಲಿಪಾಟೀಲ, ಚಿಂಚೋಳಿ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರು, ಶಿವಾನಂದ ಕಶೆಟ್ಟಿ, ಅಂಬಾಜಿ ಕೌಲಗಿ, ಶಿವನಗೌಡ ಪಾಟೀಲ ಹಂಗರಗಿ, ಡಾ.ಸೂರ್ಯಕಾಂತ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.