ಕಲಬುರ್ಗಿ: ‘ಕರ್ನಾಟಕದಲ್ಲಿ ಅಧಿಕಾರ ನಡೆಸುವ ಎಲ್ಲ ಸರ್ಕಾರಗಳು ಮೊದಲು ಕನ್ನಡಿಗರ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಸಮಾನವಾಗಿ ಒದಗಿಸುವ ಅಗತ್ಯವಿದೆ’ ಎಂದು ಸಾರಂಗಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾವು ನಗರದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಲಬುರ್ಗಿ, ಯಾದಗಿರಿ ಮತ್ತು ಬೀದರ್ ಭಾಗದ ವಿದ್ಯಾರ್ಥಿಗಳಿಗೆ ‘ಗುಣಾಗ್ರಣಿ’ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಡಿಡಿಪಿಐ ಶಾಂತಗೌಡ ಪಾಟೀಲ ಮಾತನಾಡಿ, ‘ಯಾವುದೇ ಒಬ್ಬ ಮನುಷ್ಯ ಆರಂಭದಲ್ಲಿ ಅನುಭವಿಸುವ ಅವಮಾನಗಳು ಆನಂತರ ಸನ್ಮಾನಕ್ಕೆ ತಳಪಾಯ ಹಾಕುತ್ತವೆ. ಬದುಕಿನಲ್ಲಿ ವೇದನೆ ಅನುಭವಿಸಿದ ವ್ಯಕ್ತಿ ಮಾತ್ರ ಸಾಧನೆಯ ಶಕ್ತಿಯಾಗಿ ಹೊರಹೊಮ್ಮುತ್ತಾನೆ. ಕಷ್ಟಗಳಿಗೆ ಹೆದರದೆ ಬದುಕಿನಲ್ಲಿ ಇಷ್ಟವಾದ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆಗಳನ್ನು ಹಾಕಿದರೆ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ’ ಎಂದರು.
ಪ್ರಾಸ್ತಾವಿಕವಾಗಿ ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು. ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಸವರಾಜ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ದೇಸಾಯಿ, ಮಲ್ಲಿನಾಥ ಪಾಟೀಲ ಕಾಳಗಿ, ಕಲ್ಯಾಣಕುಮಾರ ಶೀಲವಂತ, ಚಿಂತಕ ಎಸ್.ಎಂ.ಪಟ್ಟಣಕರ್, ದೇವೇಂದ್ರಪ್ಪ ಗಣಮುಖಿ, ವಿದ್ಯಾಸಾಗರ ದೇಶಮುಖ, ಸಾಹಿತಿ ಜಗನ್ನಾಥ ಎಲ್.ತರನಳ್ಳಿ, ನಾಗರಾಜ ದಣ್ಣೂರ, ಹಾಸ್ಯ ಕಲಾವಿದ ರೇವಣಸಿದ್ಧಯ್ಯ ಸ್ವಾಮಿ ಹುಮನಾಬಾದ್, ಹಣಮಂತರಾಯ ಅಟ್ಟೂರ, ಮಾಲತಿ ರೇಷ್ಮಿ, ಎಂ.ಬಿ.ನಿಂಗಪ್ಪ ಇದ್ದರು.
ಕಲಬುರ್ಗಿ, ಯಾದಗಿರಿ ಮತ್ತು ಬೀದರ್ ಭಾಗದ ಸುಮಾರು 175 ಕ್ಕೂ ಹೆಚ್ಚು ಕನ್ನಡ ಅಂಕವೀರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
**
ಬದುಕಿನಲ್ಲಿ ವೇದನೆ ಅನುಭವಿಸಿದ ವ್ಯಕ್ತಿ ಮಾತ್ರ ಸಾಧನೆಯ ಶಕ್ತಿಯಾಗಿ ಹೊರಹೊಮ್ಮುತ್ತಾನೆ. ಮಕ್ಕಳಿಗೆ ಸಾಧನಾಶಕ್ತಿ ತುಂಬುವುದು ಪಾಲಕರ ಜವಾಬ್ದಾರಿ
- ಶಾಂತಗೌಡ ಪಾಟೀಲ, ಡಿಡಿಪಿಐ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.