ಗುಲ್ಬರ್ಗ: ಭಾರತವು ಸ್ವತಂತ್ರ ಪಡೆದ (1947 ಆಗಸ್ಟ್ 15) ವರ್ಷದ ಬಳಿಕ (1948 ಸೆಪ್ಟೆಂಬರ್ 17) ವಿಮೋಚನೆಗೊಂಡು 1952ರಲ್ಲಿ ಚೊಚ್ಚಲ ಚುನಾವಣೆ ಎದುರಿಸಿದ ಗುಲ್ಬರ್ಗ ಲೋಕಸಭಾ ಕ್ಷೇತ್ರವು ಹಿಂದೆ ಹೈದರಾಬಾದ್, ಮೈಸೂರು ಆಡಳಿತಕ್ಕೆ ಒಳಪಟ್ಟಿತ್ತು, ಈಗ ಕರ್ನಾಟಕಕ್ಕೆ ಒಳಪಟ್ಟಿದೆ.
ಈ ಬಾರಿ ಸೇರಿ 16 ಸಾರ್ವತ್ರಿಕ ಮತ್ತು 2 ಉಪ ಚುನಾವಣೆ ಸೇರಿದಂತೆ ಒಟ್ಟು 18 ಚುನಾವಣೆಯನ್ನು ಕಂಡಿದೆ. ಈ ಪೈಕಿ ಮೊದಲ (1952) ಚುನಾವಣೆ ನಡೆದಾಗ ಕ್ಷೇತ್ರವು ಹೈದರಾಬಾದ್ ಆಡಳಿತಕ್ಕೆ ಒಳಪಟ್ಟಿತ್ತು. ಆ ಬಳಿಕ ಮೈಸೂರು ರಾಜ್ಯದಡಿ ನಾಲ್ಕು ಹಾಗೂ ಕರ್ನಾಟಕ ನಾಮಕರಣದ ಬಳಿಕ 13 ಚುನಾವಣೆಗೆ ಸಾಕ್ಷಿಯಾಗಿದೆ.
ಕರ್ನಾಟಕ ನಾಮಕರಣದ ಐತಿಹಾಸಿಕ ನಿರ್ಣಯದ ವೇಳೆಯಲ್ಲಿ ಜಿಲ್ಲೆಯಿಂದ ವಿಧಾನ ಸಭೆಗೆ ಆಯ್ಕೆಯಾಗಿದ್ದ ಮಲ್ಲಿಕಾರ್ಜುನ ಖರ್ಗೆ (ಗುರುಮಠಕಲ್) ಮತ್ತು ಧರ್ಮಸಿಂಗ್ (ಜೇವರ್ಗಿ) ಪ್ರಸ್ತುತ ಗುಲ್ಬರ್ಗ ಮತ್ತು ಬೀದರ್ ಲೋಕಸಭೆಯ ಸಂಸದರೂ ಆಗಿದ್ದಾರೆ. ಆಗ ಶಾಸಕರಾಗಿದ್ದ ಬಹುತೇಕರು ಈಗ ಸಕ್ರಿಯ ರಾಜಕಾರಣದಲ್ಲಿ ಇಲ್ಲ.
ನಂತರದ ಬೆಳವಣಿಗೆಯಲ್ಲಿ ಇಲ್ಲಿನ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ– ಹೆಸರು ಬದಲಾಗಿವೆ. ಮತದಾರರ ಸಂಖ್ಯೆಯೂ 4.7 ಪಟ್ಟು ಹೆಚ್ಚಾಗಿದೆ. ಆದರೆ ಅಂದಿನಿಂದ ಇಂದಿನ ತನಕ ಕ್ಷೇತ್ರ ಪುನರ್ವಿಂಡಗಣೆ, ಸಾಮಾನ್ಯದಿಂದ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟರೂ, ಈ ಲೋಕಸಭಾ ಕ್ಷೇತ್ರಕ್ಕೆ ‘ಗುಲ್ಬರ್ಗ’ ಹೆಸರೇ ಉಳಿಸಿಕೊಂಡಿದೆ.
ಹೈದರಾಬಾದ್: ಗುಲ್ಬರ್ಗ ಕ್ಷೇತ್ರವು 1952ರಲ್ಲಿ ಹೈದರಾಬಾದ್ಗೆ ಒಳಪಟ್ಟಿತ್ತು. ಆಗ ಹೈದರಾಬಾದ್ನ 21 ಲೋಕಸಭಾ ಕ್ಷೇತ್ರದ ಪೈಕಿ ಗುಲ್ಬರ್ಗ ಒಂದಾಗಿತ್ತು. ಈಗಿನ ಕರ್ನಾಟಕವನ್ನು ಪ್ರತಿನಿಧಿಸುವ ಪ್ರಮುಖ ನಾಲ್ಕು ಕ್ಷೇತ್ರಗಳು ಆಗ ಹೈದರಾಬಾದ್ ವ್ಯಾಪ್ತಿಯಲ್ಲಿದ್ದರೆ, ಉಳಿದವು ಈಗಿನ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ (ತೆಲಂಗಾಣ)ಕ್ಕೆ ಒಳಪಟ್ಟಿತ್ತು.
ಗುಲ್ಬರ್ಗದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ವಾಮಿ ರಮಾನಂದ ತೀರ್ಥ, ಬೀದರ್ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಶೌಕತ್ ಉಲ್ಲಾ ಅನ್ಸಾರಿ, ಯಾದಗಿರಿ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಕೃಷ್ಣಾಚಾರ್ಯ ಜೋಶಿ ಹಾಗೂ ಕುಷ್ಟಗಿ ಕ್ಷೇತ್ರದಲ್ಲಿ ಪಕ್ಷೇತರರಾದ ಶಿವಮೂರ್ತಿ ಸ್ವಾಮಿ ಆಯ್ಕೆಯಾಗಿದ್ದರು. ಎಲ್ಲ ಕ್ಷೇತ್ರಗಳಲ್ಲೂ ಅಂದಾಜು 3.5ಲಕ್ಷದ ಆಸುಪಾಸು ಮತದಾರರಿದ್ದರು. ಮತದಾನ ಪ್ರಮಾಣ ಕಡಿಮೆ ಇದ್ದರೂ ಗೆದ್ದ ಎಲ್ಲ ಅಭ್ಯರ್ಥಿಗಳು ಶೇ 50ಕ್ಕೂ ಹೆಚ್ಚು ಮತ ಪಡೆದಿದ್ದರು.
ಮೈಸೂರು: 1ನವೆಂಬರ್ 1956ರಲ್ಲಿ ಭಾಷಾವಾರು ರಾಜ್ಯ ರಚನೆ ಆಧಾರದಲ್ಲಿ ಗುಲ್ಬರ್ಗ ಕ್ಷೇತ್ರವು ಹೈದರಾಬಾದ್ ಸಂಸ್ಥಾನದಿಂದ ಮೈಸೂರು ವ್ಯಾಪ್ತಿಗೆ ಒಳಪಟ್ಟಿತು. ಆ ಬಳಿಕ 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಮೈಸೂರು ರಾಜ್ಯದ 28 ಕ್ಷೇತ್ರಗಳ ಪೈಕಿ ಗುಲ್ಬರ್ಗವೂ ಒಂದಾಯಿತು. ನಾಲ್ಕು ಚುನಾವಣೆಯನ್ನು ಎದುರಿಸಿತು.
ಕರ್ನಾಟಕ: 1 ನವೆಂಬರ್್ 1973ರಲ್ಲಿ ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಯಿತು. ಗುಲ್ಬರ್ಗದಲ್ಲಿ ಚೊಚ್ಚಲ ಉಪಚುನಾವಣೆ ನಡೆಯಿತು. ಕಾಂಗ್ರೆಸ್ನ ಸಿದ್ರಾಮರೆಡ್ಡಿ ಆಯ್ಕೆಯಾದರು. ಕರ್ನಾಟಕ ರಾಜ್ಯದಲ್ಲಿ ಚುನಾಯಿತರಾದ ಮೊದಲ ಸಂಸದರು ಸಿದ್ರಾಮರೆಡ್ಡಿ ಎನ್ನುತ್ತವೆ ದಾಖಲೆಗಳು. ಆ ಬಳಿಕ ಗುಲ್ಬರ್ಗ 12 ಚುನಾವಣೆ ಕಂಡಿದೆ.
371 (ಜೆ): ಪ್ರಾದೇಶಿಕ ಹಿಂದುಳಿವಿಕೆಯ ಕಾರಣ 371ನೇ ಕಲಂ ತಿದ್ದುಪಡಿ ಬೇಡಿಕೆ ಕೂಗು ಹಚ್ಚಿತ್ತು. ಹೈದರಾಬಾದ್ ಕರ್ನಾಟಕಕ್ಕೆ ಸಂವಿಧಾನದ ವಿಶೇಷ ಸ್ಥಾನಮಾನ ನೀಡುವ 371ನೇ ಜೆ ಕಲಂ ಜಾರಿಯಾಯಿತು. ನಂತರ ನಡೆಯುತ್ತಿರುವ ಮೊದಲ ಚುನಾವಣೆಯ ಮತದಾನಕ್ಕೆ ವೇದಿಕೆ ಸಿದ್ಧವಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.