ಕಲಬುರ್ಗಿ: ‘ಬಿಜೆಪಿ ಸರ್ಕಾರ ಸಂವಿಧಾನ ಮಾತ್ರವಲ್ಲ, ಇತಿಹಾಸವನ್ನೇ ಬದಲಿಸುವತ್ತ ಹೆಜ್ಜೆ ಹಾಕುತ್ತಿದೆ’ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಜೀಜ್ ಪಾಷಾ ಆರೋಪಿಸಿದರು.
ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಭಾರತ ಕಮ್ಯೂನಿಸ್ಟ್ ಪಕ್ಷದ 23ನೇ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಸಮ್ಮೇಳನದಲ್ಲಿ ಅವರು ಮಾತನಾಡಿ, ‘ಗುಜರಾತ್ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಆದರೆ ಸ್ಥಾನಗಳು ಕಡಿಮೆಯಾಗಿವೆ. ದೇಶದಲ್ಲಿ ನರೇಂದ್ರಮೋದಿ ಅವರ ಜನಪ್ರಿಯತೆ ಕುಸಿಯುತ್ತದೆ ಎನ್ನುವುದಕ್ಕೆ ಗುಜರಾತ್ ಚುನಾವಣೆ ಸಾಕ್ಷಿಯಾಗಿದೆ’ ಎಂದರು.
‘ದುಡಿಯುವ ವರ್ಗದ ಮೇಲೆ ಬಿಜೆಪಿ ದಬ್ಬಾಳಿಕೆ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ದೇಶದಲ್ಲಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡುವ ಮೂಲಕ ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ’ ಎಂದು ಅವರು ಆರೋಪಿಸಿದರು.
ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ.ಲೋಕೇಶ ಮಾತನಾಡಿ, ‘2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ ಕೇಂದ್ರ ಸರ್ಕಾರ ಅದನ್ನು ಈಗ ಮರೆತುಬಿಟ್ಟಿದೆ. ರಾಜ್ಯದ 17 ಸಂಸದರು ಕೇಂದ್ರದ ಅನುದಾನದಲ್ಲಿ ಒಂದೊಂದು ಗ್ರಾಮ ದತ್ತು ಪಡೆದು ಮಾದರಿಯಾಗಿ ರೂಪಿಸುವುದಾಗಿ ಹೇಳಿದ್ದು ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಆರೋಪಿಸಿದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಪಿ.ವಿಲಾಸಕುಮಾರ, ಬಿ.ಕೆ.ಎಂ.ಯು ರಾಜ್ಯ ಕಾರ್ಯದರ್ಶಿ ಡಾ.ಕೆ.ಎಸ್.ಜನಾರ್ದನ್, ಫಾತಿಮಾ, ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಪಕ್ಷದ ಜಿಲ್ಲಾ ಘಟಕದ ಸಹಕಾರ್ಯದರ್ಶಿಗಳಾದ ಮಹೇಶಕುಮಾರ ರಾಠೋಡ, ಪ್ರಭುದೇವ ಯಳಸಂಗಿ, ನಗರ ಕಾರ್ಯದರ್ಶಿ ಎಚ್.ಎಸ್.ಪತಕಿ, ಮುಖಂಡರಾದ ಗೋಪಾಲರಾವ. ಪದ್ಮಾಕರ್ ಜಾನೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.