ಕಲಬುರ್ಗಿ: ‘ಕೊರೊನಾ ವೈರಾಣು ಹಬ್ಬಿದ ಕಾರಣ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಹೊರ ರಾಜ್ಯಗಳಿಂದ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದ್ದು, ಪ್ರಸಕ್ತ ವರ್ಷ 100ರಿಂದ 150 ಸೀಟ್ಗಳ ಕಡಿಮೆಯಾಗಬಹುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ ತಿಳಿಸಿದರು.
‘ಕಳೆದ ಬಾರಿ 750ಕ್ಕೂ ಹೆಚ್ಚು ಪ್ರವೇಶ ಬಂದಿದ್ದವು. ಪ್ರಸಕ್ತ ವರ್ಷ ಶುಕ್ರವಾರದವರೆಗೆ 450ರಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇನ್ನೂ ಎರಡು ದಿನ ಕಾಲಾವಕಾಶವಿದ್ದು, 600 ಮಂದಿ ಪ್ರವೇಶ ಪಡೆಯುವ ನಿರೀಕ್ಷೆ ಇದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.
‘ಕಳೆದ ಬಾರಿ ಹೊರರಾಜ್ಯಗಳಿಂದಲೇ 224 ವಿದ್ಯಾರ್ಥಿಗಳು ಬಂದಿದ್ದರು. ಈಗ ತುಸು ಹಿಂಜರಿಕೆ ಪಡುತ್ತಿದ್ದಾರೆ. ಹೀಗಾಗಿ, ವಿಶ್ವವಿದ್ಯಾಲಯದ ಎಲ್ಲ ತಜ್ಞರೂ ಸಭೆ ಸೇರಿ ಚರ್ಚಿಸಿದ್ದೇವೆ. ಶೈಕ್ಷಣಿಕ ಅರ್ಹತೆಯನ್ನು ಸಡಿಲಗೊಳಿಸಿದ್ದೇವೆ. ಈ ಮೊದಲು 40 ಮಂದಿ ಇರುತ್ತಿದ್ದ ಕೊಠಡಿಯಲ್ಲಿ ಈಗ 22 ಮಂದಿ ಮಾತ್ರ ಇರುತ್ತಾರೆ. ಹಾಸ್ಟೆಲ್ಗಳಲ್ಲೂ ಸುರಕ್ಷಿತ ಅಂತರಕ್ಕೆ ಎಲ್ಲ ಸಿದ್ಧತೆ ಮಾಡಿದ್ದೇವೆ. ಯುಜಿಸಿ ನೀಡುವ ಮರ್ಗದರ್ಶನದ ಪ್ರಕಾರವೇ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ’ ಎಂದರು.
‘ಆನ್ಲೈನ್ಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಿಸಿದಾಗ ಮೊದಮೊದಲು ಹೆಚ್ಚು ಆಸಕ್ತಿ ತೋರಲಿಲ್ಲ. ಅದರಲ್ಲೂ ರಾಜ್ಯದ ವಿದ್ಯಾರ್ಥಿಗಳು ಕೂಡ ಈಗ ಬೇರೆಬೇರೆ ಆನ್ಲೈನ್ ಕೋರ್ಸ್ಗಳನ್ನೇ ಆಯ್ಕೆ ಮಾಡಿಕೊಳ್ಳುವಲ್ಲಿ ಆಸಕ್ತಿ ಹೊಂದಿದ್ದಾರೆ. ಇದರಿಂದ ಶೇ 40ರಷ್ಟು ಸೀಟ್ಗಳು ಕಡಿಮೆ ಆಗುವ ಭಯವಿತ್ತು. ಆದರೆ, ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಂಡ ಮೇಲೆ ಪ್ರವೇಶಗಳು ಆರಂಭವಾಗಿವೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.