ಕಲಬುರ್ಗಿ: ‘ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಏಕಮುಖವಾಗಿದೆ. ಇದಕ್ಕೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಪೂರ್ವ ಚರ್ಚೆ ನಡೆಸದೇ ಜಾರಿಗೆ ತಂದಿದ್ದು ಖಂಡನಾರ್ಹ’ ಎಂದು ಆರೋಪಿಸಿ, ನಗರದಲ್ಲಿ ಶುಕ್ರವಾರ ಎಐಡಿಎಸ್ಒ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಕಾರ್ಯಕರ್ತರು, ಕೆಲಹೊತ್ತು ಧರಣಿ ನಡೆಸಿ ಕೇಂದ್ರ ಸರ್ಕಾರದ ನೀತಿ ವಿರುದ್ಧ ಆಕ್ರೋಶ ಹೊರಹಾಕಿದರು. ಹೊಸ ಶಿಕ್ಷಣ ನೀತಿಯನ್ನು ಹಿಂದಕ್ಕೆ ಪಡೆಯುವಂತೆ ಘೋಷಣೆ ಹಾಕಿದರು.
‘ಯಾವುದೇ ನೀತಿ ಜಾರಿಗೆ ತರುವ ಮುನ್ನ ಅದರ ಆಗು–ಹೋಗಿಗಳ ಬಗ್ಗೆ ಪರಿಶೀಲನೆ ನಡೆಯಬೇಕು. ಸಂಬಂಧಿಸಿದವರು ಹಾಗೂ ತಜ್ಞರ ಅಭಿಪ್ರಾಯ ಸಂಗ್ರಹಿಸಬೇಕು. ಅದರೆ, ಬಿಜೆಪಿ ಸರ್ಕಾರ ತನ್ನ ಮನಸ್ಸಿಗೆ ಬಂದಂತೆ ನೀತಿಯನ್ನು ರೂಪಿಸಿದೆ. ಅದರಲ್ಲಿ ಹಲವು ದೋಷಗಳಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಿಜೆಪಿ ಹಾಗೂ ಆರ್ಎಸ್ಎಸ್ ಸಿದ್ಧಾಂತಕ್ಕೆ ಪೂರಕವಾಗಿರುವ ಸಂಘಟನೆಗಳ ಅಭಿಪ್ರಾಯ ಪಡೆದುಕೊಳ್ಳಲಾಗಿದೆ. ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಕೈಬಿಡಲಾಗಿದೆ. ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವಂಥ ಶಿಕ್ಷಣದಲ್ಲಿ ಜ್ಯೋತಿಭಾ ಫುಲೆ, ಈಶ್ವರಚಂದ್ರ ವಿದ್ಯಾಸಾಗರ, ಭಗತ್ ಸಿಂಗ್, ನೇತಾಜಿ ಸುಭಾಷಚಂದ್ರ ಭೋಸ್, ಚಂದ್ರಶೇಖರ ಆಜಾದ್ ಮೊದಲಾದವರ ಹೆಸರುಗಳಿಲ್ಲ. ಹೀಗಿರುವಾಗ ಇದು ಪರಿಪೂರ್ಣ ಶಿಕ್ಷಣ ಆಗಲು ಸಾಧ್ಯವಿಲ್ಲ’ ಎಂದೂ ಅವರು ದೂರಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಹಣಮಂತ ಮಾತನಾಡಿ, ‘ಮಹಾನ್ ನೇತಾರರ ಹೆಸರುಗಳನ್ನು ಪಠ್ಯಕ್ರಮದಿಂದ ಕೈಬಿಡುವ ಮೂಲಕ ಕೇಂದ್ರ ಸರ್ಕಾರ ಸ್ವಾತಂತ್ರೃ ಹೋರಾಟಗಾರರಿಗೆ ದ್ರೋಹ ಮಾಡಿದೆ. ಚಾಲ್ತಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸುವ ಮೂಲಕ ಗೊಂದಲ ಮೂಡಿಸಿದಂತಾಗಲಿದೆ’ ಎಂದು ಕಿಡಿಕಾರಿದರು.
ಉಪಾಧ್ಯಕ್ಷೆ ಸ್ನೇಹಾ ಕಟ್ಟಿಮನಿ ಮಾತನಾಡಿ, ‘5ನೇ ತರಗತಿಯವರೆಗೂ ಚಟುವಟಿಕೆ ಆಧಾರಿತ ಶಿಕ್ಷಣ ಹೆಸರಿನಕಲ್ಲಿ ಕ್ರಮಬದ್ಧ ಕಲಿಯನ್ನು ಹಾಳು ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಲಿದೆ’ ಎಂದು ದೂರಿದರು.
‘ಕೂಡಲೇ ಕೇಂದ್ರ ಸರ್ಕಾರ ತನ್ನ ನಿಲುವು ಮರು ಪರಿಶೀಲಿಸಬೇಕು’ ಎಂದು ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಈರಣ್ಣ ಇಸಬಾ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.