ಕಲಬುರ್ಗಿ: ಜಿಲ್ಲೆಯಲ್ಲಿ ಅತಿ ಹೆಚ್ಚು ಜನರು ಕೋಲಿ ಸಮಾಜದವರಿದ್ದು, ಈ ಸಮಾಜದ ಆರಾಧ್ಯ ದೈವ ಹಾಗೂ 12ನೇ ಶತಮಾನದಲ್ಲಿ ನಿಜಶರಣ ಎನಿಸಿಕೊಂಡು ಬಾಳಿದ್ದ ಅಂಬಿಗರ ಚೌಡಯ್ಯನವರ ಮೂರ್ತಿಪ್ರತಿಷ್ಠಾಪನೆಗೆ ಜಾಗ ಗುರುತಿಸಬೇಕು ಎಂದು ಒತ್ತಾಯಿಸಿ ಅಂಬಿಗರ ಸೇವಾ ದಳದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ 65 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕೋಲಿ ಜನಾಂಗವು ಜಿಲ್ಲೆಯ ಹಲವೆಡೆ ವಾಸವಾಗಿದೆ. ಅಂಬಿಗರ ಚೌಡಯ್ಯನವರ ಆದರ್ಶ ಹಾಗೂ ತತ್ವಗಳನ್ನು ಜೀವಂತವಾಗಿಡಬೇಕಾದರೆ ಕಲಬುರ್ಗಿ ನಗರದ ಪ್ರಮುಖ ಸ್ಥಳದಲ್ಲಿ ಮೂರ್ತಿ ಸ್ಥಾಪಿಸಬೇಕಿದೆ. ಮೂರ್ತಿ ಸ್ಥಾಪನೆಗಾಗಿ ಹಣವನ್ನು ಮೀಸಲಿಡುವುದಾಗಿ ಪಾಲಿಕೆಯ ಮೇಯರ್ ಹಾಗೂ ಸ್ಥಾಯಿ ಸಮಿತಿ ಸದಸ್ಯರು ಭರವಸೆ ನೀಡಿದ್ದರು. ಅದರಂತೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಕಮಕನೂರ ಅವರು ಪಾಲಿಕೆ ಬಜೆಟ್ನಲ್ಲಿ ಮೂರ್ತಿ ಸ್ಥಾಪನೆಗೆ ಹಣವನ್ನು ಮೀಸಲಿಟ್ಟಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಂಘಟನೆಯ ನಗರ ಘಟಕದ ಅಧ್ಯಕ್ಷ ರಾಜು ಸೊನ್ನ, ಬಸವರಾಜ ಮಲ್ಲಿ, ದಿಗಂಬರ, ಮಹಾಂತೇಶ, ಶರಣ ಕಿರಸಗಿ, ಬಸವರಾಜ ಸುರಪುರ, ಮಲ್ಲಿಕಾರ್ಜುನ ತಳವಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.