ಆಳಂದ: ಪಟ್ಟಣದಲ್ಲಿ ಜಗಳ ಬಿಡಿಸಲು ಹೋಗಿದ್ದ ಆಳಂದ ಪೋಲಿಸ್ ಠಾಣೆಯ ಕಾನ್ಸ್ಟೆಬಲ್ ಗಣಪತರಾವ ಘಂಟೆ ಮೇಲೆ ಭಾನುವಾರ ಕಿಡಿಗೇಡಿಗಳು ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ಆಳಂದ ಪೋಲಿಸ್ ಠಾಣೆಯಲ್ಲಿ 8 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಆಳಂದ ಪಟ್ಟಣದ ಹೊರವಲಯದ ಚೆಕ್ಪೋಸ್ಟ್ ಹತ್ತಿರ ಮುಖ್ಯರಸ್ತೆ ಮೇಲೆ ಟಂಟಂ- ಬುಲೆರೊ ವಾಹನದ ನಡುವೆ ಡಿಕ್ಕಿ ಸಂಭವಿಸಿದೆ. ಈ ವೇಳೆ ಎರಡೂ ವಾಹನದಲ್ಲಿದ್ದ ಚಾಲಕರು ಮತ್ತು ಕೆಲ ಯುವಕರ ನಡುವೆ ವಾದವಿವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ಪೊಲೀಸ್ ಕಾನ್ಸ್ಟೆಬಲ್ ಗಣಪತರಾವ ಘಂಟೆ ಅವರು ಸ್ಥಳಕ್ಕೆ ಧಾವಿಸಿ ಎರಡೂ ಗುಂಪುಗಳ ನಡುವೆ ಜಗಳ ಬಿಡಿಸಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಕೆಲ ಕಿಡಿಗೇಡಿ ಯುವಕರು ಪೋಲಿಸ್ ಕಾನ್ಸ್ಟೆಬಲ್ ಗಣಪತರಾವ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯಲ್ಲಿ ಗಣಪತರಾವ್ ಅವರ ಕೈ, ಕಣ್ಣು ಮತ್ತು ಮೈಮೇಲೆ ಗಾಯಗಳಾಗಿವೆ. ನಂತರ ಸ್ಥಳಕ್ಕೆ ಪೋಲಿಸ್ ವಾಹನ ಬಂದಾಗ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಹಾಗೂ ಕರ್ತವ್ಯ ನಿರತ ಪೋಲಿಸ್ ಕಾನ್ಸ್ಟೆಬಲ್ ಮೇಲೆ ಹಲ್ಲೆ ಆರೋಪದಡಿ 8 ಜನರ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಗಳು ಕೊಡಲ ಹಂಗರಗಾ ಸಮೀಪದ ನಿಪ್ಪಾಣಿ ತಾಂಡಾದ ನಿವಾಸಿಗಳಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.