ADVERTISEMENT

‍ಕಲಬುರ್ಗಿ: ಪರವಾನಗಿ ಇಲ್ಲದ ಆಟೊಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಕಲ್ಯಾಣ ಕರ್ನಾಟಕ ಆಟೊ ಚಾಲಕರ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 3:16 IST
Last Updated 10 ಮಾರ್ಚ್ 2021, 3:16 IST
ಕಲ್ಯಾಣ ಕರ್ನಾಟಕ ಆಟೊ ಚಾಲಕರ ಸಂಘದ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಕಲ್ಯಾಣ ಕರ್ನಾಟಕ ಆಟೊ ಚಾಲಕರ ಸಂಘದ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ನಗರದಲ್ಲಿ ಪರವಾನಗಿ ಇಲ್ಲದೇ ಸಾವಿರಾರು ಆಟೊಗಳು ಸಂಚರಿಸುತ್ತಿವೆ. ಜೊತೆಗೆ ಒಂದೇ ನಂಬರ್‌ ಮೇಲೆ ಎರಡು–ಮೂರು ಆಟೊಗಳನ್ನು ಓಡಿಸುತ್ತಿದ್ದು, ಅಂಥವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಆಟೊ ಚಾಲಕರ ಸಂಘದ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದಲ್ಲಿರುವ ಆಟೊ ಚಾಲಕರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ ಸರ್ಕಾರದಿಂದ ₹ 5 ಲಕ್ಷ ಪರಿಹಾರವನ್ನು ತಕ್ಷಣ ನೀಡಬೇಕು. ನಗರದಲ್ಲಿ ಆಟೊ ನಿಲ್ದಾಣಗಳನ್ನು ನಿರ್ಮಿಸಬೇಕು. ಈಗಾಗಲೇ ಇರುವ ಆಟೊ ನಿಲ್ದಾಣಗಳಲ್ಲಿ ದ್ವಚಕ್ರ ವಾಹನ, ಚಹಾ ಅಂಗಡಿ ಮತ್ತು ಇನ್ನಿತರ ವ್ಯಾಪಾರ ಮಾಡುತ್ತಿರುವ ಜಾಗವನ್ನು ಖಾಲಿ ಮಾಡಿಸಿ ಅಲ್ಲಿರುವ ನಿಲ್ದಾಣವನ್ನು ಚಾಲಕರ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು. ಆಟೊ ಚಾಲಕರಿಗೆ ಮಂಜೂರಾಗಿರುವ 780 ಮನೆಗಳಲ್ಲಿ 397 ಜನರು ಹಣವನ್ನು ತುಂಬಿದ್ದು, ಅವರಿಗೆ ಮನೆಯ ಹಕ್ಕುಪತ್ರಗಳನ್ನು ವಿತರಿಸಬೇಕು. ನಗರದಲ್ಲಿ ತಾಲ್ಲೂಕು ಪರವಾನಗಿ ಹೊಂದಿರುವ ಆಟೊಗಳಿದ್ದು, ಅವುಗಳ ಮಾಲೀಕರಿಗೆ ದಂಡ ಹಾಕಿ ಮತ್ತೆ ನಗರದಲ್ಲಿ ಓಡಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರದಲ್ಲಿ ಸಾರ್ವಜನಿಕರು ಆಟೊ ಮೀಟರ್‌ಗೆ ಬೇಡಿಕೆ ಇಟ್ಟಿಲ್ಲದಿರುವುದರಿಂದ ಅದನ್ನು ರದ್ದುಗೊಳಿಸಬೇಕು ಅಥವಾ ದರ ಪರಿಷ್ಕರಣೆ ಮಾಡಬೇಕು. 18 ವರ್ಷ ಮೀರಿ ಆಟೊಗಳನ್ನು ತಾಲ್ಲೂಕಿನಲ್ಲಿ ನಡೆಸಲು ಪರವಾನಗಿ ನೀಡುತ್ತಿದ್ದು, ಅದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಸಂಘದ ಅಧ್ಯಕ್ಷ ಲಕ್ಷ್ಮಿಕಾಂತ ಮಾಲಿಪಾಟೀಲ, ಮುಖಂಡರಾದ ಬಸವರಾಜ ಎಸ್. ಪಾಟೀಲ, ಪವನ್, ಬಸವರಾಜ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.