ಕಲಬುರಗಿ: ಜೇವರ್ಗಿ ತಾಲ್ಲೂಕಿನ ಶಖಾಪುರ ಮಠದ ಡಾ. ಸಿದ್ದರಾಮ ಶಿವಾಚಾರ್ಯರಿಗೆ ಕಾಶಿ ಜಂಗಮವಾಡಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ‘ಶ್ರೀ ಜಗದ್ಗುರು ಪಂಚಾಚಾರ್ಯ ಚರಣಕಮಲ ಚಂಚರೀಕ’ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ, ‘ಸಮಾಜದಲ್ಲಿ ಧರ್ಮ ಸಂಸ್ಕೃತಿ ಸಂರಕ್ಷಿಸಿಕೊಂಡು ಬರುತ್ತಿರುವ ಸಾಮಾಜಿಕ ಕಾರ್ಯದಲ್ಲಿ ಸಾಮರಸ್ಯ, ದೇಶಪ್ರೇಮ, ಸೌಹಾರ್ದತೆ ಬೆಳೆಸಿಕೊಂಡು ಬರುತ್ತಿರುವ ಶಖಾಪುರ ತಪೋವನ ಮಠದ ಶಿವಾಚಾರ್ಯರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಂತೋಷ ಉಂಟು ಮಾಡಿದೆ. ಇವರು ಇನ್ನೂ ಹೆಚ್ಚು ಸೇವೆ ಮಾಡಲಿ’ ಎಂದರು.
ಜಂಗಮವಾಡಿ ಮಠದಲ್ಲಿ ನೂತನ ಜಗದ್ಗುರುಗಳ ಪಟ್ಟಾಧಿಕಾರ ಮಹೋತ್ಸವ ಧರ್ಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ ಜಂಗಮವಾಡಿ ಮಠದ ಶಾಖಾ ಮಠ ಮಾಡಲು ನಾವೂ ಭೂದಾನ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
ಪ್ರಶಸ್ತಿ ಸ್ವೀಕರಿಸಿದ ಡಾ. ಸಿದ್ದರಾಮ ಶಿವಾಚಾರ್ಯರು, ‘ನನ್ನ ದೇಹದ ನರನಾಡಿಯಲ್ಲಿ ಶಕ್ತಿ ಇರುವವರೆಗೆ ಸೇವೆ ಮಾಡಲು ಸಿದ್ದ’ ಎಂದರು.
ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಕಾಶೀ ನೂತನ ಪೀಠಾಧಿಪತಿ ಡಾ. ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಉಜ್ಜಯಿನಿಯ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸಭೆಯ ಸಾನ್ನಿಧ್ಯ ವಹಿಸಿದ್ದರು.
ಸೊಲ್ಲಾಪುರ ಸಂಸದ ಡಾ.ಜಯಸಿದ್ದೇಶ್ವರ ಶಿವಾಚಾರ್ಯರು, ಮಂದರೂಪ ಶ್ರೀಗಳು, ಪಾಳಾ, ಸರಡಗಿ ಶ್ರೀಗಳು, ಮುಖಂಡರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.